ಸಂಸದ ಪುತ್ರ ಚೇತನ್ಗೌಡ ವಿರುದ್ಧ ಪ್ರಕರಣ ದಾಖಲು: ಎಸ್ಪಿ ಶಿವಪ್ರಕಾಶ್
ಮಂಡ್ಯ, ಎ.15: ಲೋಕಸಭಾ ಚುನಾವಣೆಗಾಗಿ 150 ಕೋಟಿ ರೂ. ವೆಚ್ಚ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಆಗಿರುವ ಆಡಿಯೋ ವೈರಲ್ ಸಂಬಂಧ ಸಂಸದ ಎಲ್.ಆರ್.ಶಿವರಾಮೇಗೌಡ ಪುತ್ರ ಚೇತನ್ಗೌಡ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ಹೇಳಿದ್ದಾರೆ.
ಸೋಮವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಈಗಾಗಲೇ ಎನ್ಸಿಆರ್ ಮಾಡಿಕೊಂಡಿದ್ದು, ನ್ಯಾಯಾಲಯದ ಅನುಮತಿಗಾಗಿ ಕಾಯುತ್ತಿದ್ದೇವೆ. ಕೋರ್ಟ್ ಅನುಮತಿ ಸಿಕ್ಕ ತಕ್ಷಣ ಎಫ್ಐಆರ್ ಮಾಡಲಾಗುವುದು ಎಂದರು.
ಸಿಎಂ ಬೆಂಗಾವಲು ಪೊಲೀಸ್ ವಾಹನದಲ್ಲಿ ರೌಡಿ ಪ್ರಕಾಶ್ ಎಂಬುವರು ಪ್ರಯಾಣ ಪ್ರಕರಣ ಕುರಿತಂತೆ ಮೇಲಾಧಿಕಾರಿಗಳು ವರದಿ ಕೇಳಿದ್ದು, ಪ್ರಕರಣ ಸಂಬಂಧ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದೇವೆ. ಅದು ನಮ್ಮ ಜಿಲ್ಲೆಯ ವಾಹನವೂ ಅಲ್ಲ, ಮಂಡ್ಯ ಜಿಲ್ಲೆಯ ಅಧಿಕಾರಿಗಳೂ ಅಲ್ಲ. ಮೇಲಾಧಿಕಾರಿಗಳು ಕೇಳಿದ್ದಕ್ಕೆ ವರದಿ ನೀಡಿದ್ದೇವೆ. ಆತನ ಮೇಲೆ ರೌಡಿ ಶೀಟ್ ಇದೆ. 107ರ ಅಡಿ ಪ್ರಕರಣ ಮಾಡಿ, ಬಾಂಡ್ ಮೂಲಕ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು.
ಚುನಾವಣಾ ಪ್ರಚಾರದ ವೇಳೆ ಮಾಧ್ಯಮಗಳ ವಿರುದ್ಧ ಸಿಎಂ ಕುಮಾರಸ್ವಾಮಿ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಪ್ರಕರಣವನ್ನು ಈಗಾಗಲೇ ಎನ್ಸಿಆರ್ ಮಾಡಿಕೊಂಡು ನ್ಯಾಯಾಲಯದ ಅನುಮತಿಗಾಗಿ ಕಾಯುತ್ತಿದ್ದೇವೆ. ಕೋರ್ಟ್ ಅನುಮತಿ ಸಿಕ್ಕ ತಕ್ಷಣ ಎಫ್ಐಆರ್ ದಾಖಲು ಮಾಡಲಾಗುವುದು ಎಂದೂ ಅವರು ತಿಳಿಸಿದರು.