ಅಮ್ಮನ ಪರ ಮಕ್ಕಳು ಮತಯಾಚಿಸುವುದು ತಪ್ಪೇ: ಕುಮಾರಸ್ವಾಮಿಗೆ ನಟ ದರ್ಶನ್ ಪ್ರಶ್ನೆ
ಮಂಡ್ಯ, ಎ.16: ನಾವೇನು ಕೊಲೆ, ದರೋಡೆ ಮಾಡಿದ್ದೇವೆಯೇ? ನಮ್ಮ ಅಮ್ಮನ ಪರವಾಗಿ ಪ್ರಚಾರಕ್ಕೆ ಬಂದದ್ದು ತಪ್ಪೇ ಎಂದು ನಟ ದರ್ಶನ್ ಸಿಎಂ ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸುಮಲತಾ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಅಮ್ಮನಿಗಾಗಿ(ಸುಮಲತಾ) ಎಲ್ಲವನ್ನೂ ತಡೆದುಕೊಂಡಿದ್ದೇನೆ. ಇಲ್ಲದಿದ್ದರೆ ನಮ್ಮ ಬಗ್ಗೆ ಕೀಳಾಗಿ ಮಾತಾಡುವವರನ್ನು ಬಿಡುತ್ತಿರಲಿಲ್ಲ ಎಂದು ಗುಡುಗಿದರು.
ಇಷ್ಟು ದಿನ ಪ್ರಚಾರ ಮಾಡಿದೆ. ಎಲ್ಲಾ ಟೀಕೆ, ಅವಹೇಳನ ತಡೆದುಕೊಂಡಿದ್ದೇನೆ. ಆದರೆ, ನನ್ನಂತ ಕಚಡಾ ಮನುಷ್ಯ ಬೇರೊಬ್ಬ ಇಲ್ಲ. ಆದರೆ, ಅಮ್ಮನಿಗಾಗಿ ನನ್ನ ಮತ್ತೊಂದು ಮುಖ ಇಲ್ಲಿ ತೋರಿಸಲಿಲ್ಲ ಎಂದು ಅವರು ಎಚ್ಚರಿಸಿದರು.
ನನ್ನ ವೈಯಕ್ತಿಕ ವಿಚಾರ ಗೇಲಿ ಮಾಡುತ್ತಾರೆ. ಹಸುವಿನ ಹಾಲು ಕರೆಯುವುದು ಇವರಿಗೆ ಗೊತ್ತೆ? ಹಸು ಕರು ಹಾಕಿದ ಎಷ್ಟು ದಿನಕ್ಕೆ ಯಾವ ಯಾವ ಆಹಾರ ಕೊಡುವುದು ಗೊತ್ತೆ? ವರ್ಷಕ್ಕೆ 2.5 ಕೋಟಿ ರೂ. ಪಶುಸಂಗೋಪನೆಯಿಂದ ಗಳಿಸುತ್ತೇನೆ. ಅದರಲ್ಲಿ ಸ್ವಲ್ಪ ಸಮಾಜ ಸೇವೆಗೆ ನೀಡುತ್ತೇನೆ ಎಂದೂ ಅವರು ತಿರುಗೇಟು ನೀಡಿದರು.
ಸಿನಿಮಾ ನಟರ ಬಗ್ಗೆ ಸಿಎಂ ಕೀಳಾಗಿ ಮಾತಾಡುತ್ತಾರೆ. ಆದರೆ, ನಿರ್ಮಾಪಕರಾಗಿ ಕೋಟಿ ಕೋಟಿ ರೂ. ಗಳಿಸಿಲ್ಲವೇ ? ಗಳಿಸಿದ ಹಣದಲ್ಲಿ ಎಷ್ಟು ಅನಾಥಶ್ರಮ, ವೃದ್ಧಾಶ್ರಮಗಳಿಗೆ ದೇಣಿಗೆ ನೀಡಿದ್ದಾರೆ ಎಂದು ಅವರು ತರಾಟಗೆ ತೆಗೆದುಕೊಂಡರು.
ಸುಮಲತಾ ಅಮ್ಮ ಗೆದ್ದರೆ ದೇಶವೇ ಅಲ್ಲ, ವಿಶ್ವವೇ ಗಮನ ಸೆಳೆಯುತ್ತದೆ. ಅವರನ್ನು ಗೆಲ್ಲಿಸಿ ಸ್ವಾಭಿಮಾನ ಮೆರೆಯಬೇಕು ಎಂದು ಮನವಿ ಮಾಡಿದ ದರ್ಶನ್, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಪರವಾಗಿ ಪ್ರಚಾರಕ್ಕೆ ಬರುವುದಾಗಿ ಘೋಷಿಸಿದರು.