ಮೂಲ ಸೌಕರ್ಯ ವಂಚಿತ ಬಡಾವಣೆ ನಿವಾಸಿಗಳಿಂದ ಮತದಾನ ಬಹಿಷ್ಕಾರ ಎಚ್ಚರಿಕೆ
ಮದ್ದೂರು, ಎ.17: ಸಮೀಪದ ಗೊರವನಹಳ್ಳಿಯ ಹೊಸ ಬಡಾವಣೆಯಲ್ಲಿ ಮೂಲ ಸೌಕರ್ಯ ಕಲ್ಪಿಸದ ಹಿನ್ನೆಲೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲಾಗುವುದು ಎಂದು ನಿವಾಸಿಗಳು ಬುಧವಾರ ಪ್ರತಿಭಟನೆ ಮಾಡಿದರು.
ಗೊರವನಹಳ್ಳಿಯ ಹೊಸ ಬಡಾವಣೆಯಲ್ಲಿ ಕುಡಿಯುವ ನೀರು, ಚರಂಡಿ, ರಸ್ತೆ, ಬೀದಿದೀಪ ಸೇರಿದಂತೆ ಯಾವುದೇ ಸೌಲಭ್ಯಗಳು 15 ವರ್ಷಗಳಿಂದ ಇಲ್ಲ. ಇದರಿಂದ ಇಲ್ಲಿನ ನಿವಾಸಿಗಳು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ನಿವಾಸಿಗಳು ಪಂಚಾಯತ್ ಗೆ ನಿಯಮಿತವಾಗಿ ಕಾಲ ಕಾಲಕ್ಕೆ ಕಂದಾಯ ಕಟ್ಟುತ್ತಿದ್ದರೂ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಗುರುವಾರ ನಡೆಯುವ ಚುನಾವಣೆಯಲ್ಲಿ ಮತ ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರಿಯಾಂಕಾ ಅಪ್ಪುಗೌಡ, ಬಡಾವಣೆಯ ನಿವಾಸಿಗಳಾದ ಶ್ರುತಿ, ಶಾಂತಮ್ಮ, ಲಕ್ಷ್ಮಿ, ಜಯಮ್ಮ, ಸುಮಿತ್ರ, ಶಿವಮ್ಮ, ಶಂಕರ್, ಚಂದ್ರು, ಸಂತೋಷ್, ನವೀನ್, ಇತರರು ಹಾಜರಿದ್ದರು.