ಮಾತಿನ ಮೇಲೆ ಹಿಡಿತವಿರಲಿ: ಪ್ರಧಾನಿ ಮೋದಿಗೆ ದೇವೇಗೌಡ ಎಚ್ಚರಿಕೆ
ಕೊಪ್ಪಳ, ಎ. 19: ಪ್ರಧಾನಿ ಮೋದಿ ತಾವು ಮಾತನಾಡುವ ಮಾತಿನ ಮೇಲೆ ಹಿಡಿತವಿರಬೇಕು. ನಾನು ಮೋದಿಗಿಂತ ಚೆನ್ನಾಗಿ ಮಾತನಾಡಬಲ್ಲೆ. ಆದರೆ, ನನಗೆ ಹಿಂದಿ ಬರುವುದಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಶುಕ್ರವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯಕ್ಕೆ ಸಮಸ್ಯೆ ಬಂದಾಗ ಗೌಡರ ಕುಟುಂಬ ಕಣ್ಣೀರು ಹಾಕಿದೆ. ಆದರೆ, ಕಾವೇರಿ ವಿಚಾರಕ್ಕೆ ಬಿಜೆಪಿ ಏನು ಮಾಡಿದೆ. 17 ಮಂದಿ ಸಂಸದರು ಏನು ಕೆಲಸ ಮಾಡಿದ್ದಾರೆಂದು ಗೊತ್ತಿದೆ ಎಂದು ಟೀಕಿಸಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟ ಇಪ್ಪತ್ತಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್ ಹಾಗೂ ನಾನು ನಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದೇವೆ. ಈಗಾಗಲೇ 14 ಕ್ಷೇತ್ರಗಳ ಮತದಾರನ ತೀರ್ಪು ಇವಿಎಂಗಳಲ್ಲಿ ಭದ್ರವಾಗಿದೆ. ರಾಜ್ಯದ ಮತದಾರರ ತೀರ್ಪನ್ನು ನಾವು ಒಪ್ಪಬೇಕು. ಇಷ್ಟು ಸ್ಥಾನ ಗೆಲ್ಲುತ್ತೇವೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಅಭ್ಯರ್ಥಿಯಾಗಿ ನಾವೇ ಗೆಲ್ಲುತ್ತೇವೆ ಎಂದು ಹೇಳುತ್ತೇವೆ. ಆದರೆ ಮತದಾರರ ತೀರ್ಪುನ್ನು ಎಲ್ಲರೂ ಗೌರವಿಸಬೇಕು ಎಂದು ದೇವೇಗೌಡ ಇದೇ ವೇಳೆ ತಿಳಿಸಿದರು