ಸೈನಿಕರ ಸರ್ಜಿಕಲ್ ಸ್ಟ್ರೈಕ್ ನ ಲಾಭ ಪಡೆಯುತ್ತಿರುವ ಮೋದಿ ಸರಕಾರ: ರಾಯಚೂರಿನಲ್ಲಿ ಚಂದ್ರಬಾಬು ನಾಯ್ಡು
ರಾಯಚೂರು/ಬೆಂಗಳೂರು, ಎ.19: ಸರ್ಜಿಕಲ್ ಸ್ಟ್ರೈಕ್ ಸೈನಿಕರು ಮಾಡಿದ್ದಾರೆ. ಆದರೆ, ಇದಕ್ಕೆ ಕಟ್ಟುಕಥೆ ಕಟ್ಟಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದರು.
ಶುಕ್ರವಾರ ರಾಯಚೂರಿನಲ್ಲಿ ಚುನಾವಣೆ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಜಿಕಲ್ ಸ್ಟ್ರೈಕ್ ಬಿಜೆಪಿಯ ಕಟ್ಟುಕಥೆ. ಇದನ್ನು ಮಾಡಿರುವುದು ಸೈನಿಕರು. ಅದರ ಸಂಪೂರ್ಣ ಲಾಭವನ್ನು ಮೋದಿ ಮತ್ತು ಬಿಜೆಪಿ ಪಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು
ನೋಟು ಅಮಾನ್ಯೀಕರಣದಿಂದ ದೇಶದ ಪ್ರಗತಿಗೆ ತೀವ್ರ ಹಿನ್ನಡೆಯಾಗಿದೆ. ಲಕ್ಷಾಂತರ ಉದ್ಯೋಗ ನಷ್ಟವಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿದೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಸರಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಿಬಿಐ ಮತ್ತಿತರೆ ತನಿಖಾ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಿದೆ ಎಂದು ವಾಗ್ದಾಳಿ ನಡೆಸಿದರು.
ಖಂಡನೀಯ: ಪ್ರಧಾನಿ ಮೋದಿ ಹೆಲಿಕಾಪ್ಟರ್ ತಪಾಸಣೆ ನಡೆಸಿದ್ದಕ್ಕೆ ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ಮುಹಮ್ಮದ್ ಮೊಹ್ಸಿನ್ ಅವರನ್ನು ಅಮಾನತು ಮಾಡಿರುವುದು ಖಂಡನೀಯ ಎಂದು ಚಂದ್ರಬಾಬು ನಾಯ್ಡು ಹೇಳಿದರು.
ಬಿಜೆಪಿ ಮೇಲೆ ದಾಳಿ ಇಲ್ಲ
ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಉದ್ದೇಶ ಪೂರ್ವಕವಾಗಿ ಐಟಿ ದಾಳಿ ಮಾಡಿಸುತ್ತಾರೆ. ಆದರೆ, ಬಿಜೆಪಿ ನಾಯಕರ ಮೇಲೆ ಇದುವರೆಗೆ ದಾಳಿ ನಡೆದಿಲ್ಲ ಏಕೆ?
-ಚಂದ್ರಬಾಬು ನಾಯ್ಡು, ಮುಖ್ಯಮಂತ್ರಿ, ಆಂಧ್ರಪ್ರದೇಶ