ಶ್ರೀಲಂಕಾ ಬಾಂಬ್ ಸ್ಫೋಟ: ತುಮಕೂರಿನ ಉದ್ಯಮಿ ಮೃತ್ಯು
ತುಮಕೂರು,ಎ.22:ಶ್ರೀಲಂಕಾದಲ್ಲಿ ರವಿವಾರ ನಡೆದ ಬಾಂಬ್ ಸ್ಫೋಟದಲ್ಲಿ ತುಮಕೂರಿನ ಸ್ವರಸ್ಪತಿಪುರಂನ ಉದ್ಯಮಿ ರಮೇಶ್.ಎಲ್ (44) ಎಂಬವರು ಮೃತಪಟ್ಟಿದ್ದಾರೆ.
ಶಾಸಕ ಜ್ಯೋತಿ ಗಣೇಶ್ ಮಾತನಾಡಿ ರಮೇಶ್ ಹಾಗೂ ನಾನು ಇಬ್ಬರು ಸರ್ವೋದಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದೆವು, ನೆಲಮಂಗಲದ ಸ್ನೇಹಿತರೊಂದಿಗೆ ಶ್ರೀಲಂಕಾಕ್ಕೆ ತೆರಳಿದ್ದಾಗ ಇಂತಹ ರ್ದುಘಟನೆ ನಡೆದಿದ್ದು,ಇವರೊಂದಿಗೆ ತೆರಳಿದ್ದ ನೆಲಮಂಗಲದ ಶಿವಣ್ಣ ಎಂಬುವರ ಮಾಹಿತಿ ಇನ್ನು ದೊರೆಕಿಲ್ಲ, ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ನು ನೋಡಿದಾಗಲೇ ರಮೇಶ್ ಅವರು ಮೃತರಾಗಿರುವ ಬಗ್ಗೆ ತಿಳಿದು ಬಂದಿದ್ದು, ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದರು.
ಪೊಲೀಸ್ ಅಧಿಕಾರಿಗಳು ರಮೇಶ್ ಅವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಸಂಜೆ ವೇಳೆಗೆ ಸ್ಪಷ್ಟ ಮಾಹಿತಿ ದೊರಕಲಿದೆ ಎಂದ ಅವರು ವಿದೇಶಾಂಗ ಸಚಿವರಾಗಿರುವ ಸುಷ್ಮಾ ಸ್ವರಾಜ್ ನಿರಂತರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಶೀಘ್ರ ಮೃತದೇಹಗಳನ್ನು ದೇಶಕ್ಕೆ ಕರೆತರುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.
ಮೃತರು ಪತ್ನಿ ಮಂಜುಳಾ, ಮಗಳು ದೀಕ್ಷ, ಮಗ ಶೋಭಿತ್ ಅವರನ್ನು ಅಗಲಿದ್ದಾರೆ. ರಮೇಶ್ ಅವರ ಸಾವಿನ ವಿಷಯ ತಿಳಿದ ಸ್ನೇಹಿತರು, ಬಂಧುಗಳು ಶೋಕ ತಪ್ತರಾಗಿದ್ದು, ಶಾಸಕ ಜ್ಯೋತಿ ಗಣೇಶ್, ಡಿವೈಎಸ್ಪಿ ಮೃತರ ಮನೆಗೆ ಭೇಟಿ ನೀಡಿದರು.