ಬೀದಿಗೆ ಬಂದ ಹುತಾತ್ಮ ಯೋಧ ಗುರು ಕುಟುಂಬದ ಜಗಳ
ಜನರ ಸ್ಪಂದನೆಯೇ ಸಂಬಂಧಕ್ಕೆ ಹುಳಿ ಹಿಂಡಿತೇ ?
ಭಾರತೀನಗರ,ಎ.23: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಕುಟುಂಬದಲ್ಲಿ ಹೊಗೆಯಾಡುತ್ತಿದ್ದ ಅತ್ತೆ-ಸೊಸೆಯರ ಜಗಳ ಇದೀಗ ಹಾದಿ-ಬೀದಿ ರಂಪಾಟವಾಗಿ ಗುಡಿಗೆರೆ ಗ್ರಾಮಸ್ಥರು ತಲೆತಗ್ಗಿಸುವಂತಾಯಿತು.
ಇಡೀ ದೇಶವೇ ಯೋಧರ ಸಾವಿಗೆ ಮಮ್ಮಲ ಮರುಗಿದ್ದು, ರಾಜ್ಯ ಸರ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಯೋಧ ಗುರುವಿನ ಅಂತ್ಯಸಂಸ್ಕಾರ ನಡೆಸಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಗುಡಿಗೆರೆಗೆ ಆಗಮಿಸಿ ಗುರು ಕುಟುಂಬಕ್ಕೆ ಸಾಂತ್ವನ ಹೇಳಿ, ಪರಿಹಾರವನ್ನು ದೊರಕಿಸಿದ್ದರು. ಇದಲ್ಲದೆ ಅನೇಕ ಕಂಪೆನಿ, ಸಂಘ-ಸಂಸ್ಥೆಗಳಿಂದ ನೆರವಿನ ಮಹಾಪೂರವೇ ಹರಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಹಲವಾರು ಬಾರಿ ಜಗಳ ನಡೆದಿದ್ದು, ಅತ್ತೆ ಚಿಕ್ಕೋಳಮ್ಮ ಹಾಗೂ ಗುರು ಪತ್ನಿ ಕಲಾವತಿ ನಡುವೆ ಇದ್ದ ಮನಸ್ತಾಪ ಮಂಗಳವಾರ ಬೀದಿಗೆ ಬಂದು ಇಬ್ಬರೂ ಪರಸ್ಪರ ಬೈದಾಡಿ ನಿಂದಿಸಿದ ಪ್ರಸಂಗ ನಡೆಯಿತು ಎನ್ನಲಾಗಿದೆ.
ಆದರೆ ಗ್ರಾಮಸ್ಥರು ಇವರ ಜಗಳವನ್ನು ಬಿಡಿಸಲು ಮುಂದಾಗಲಿಲ್ಲ. ಈಗಾಗಲೇ ಹಲವಾರು ಬಾರಿ ಮುಖಂಡರು, ಯಜಮಾನರು ಸೇರಿ ಇಬ್ಬರ ನಡುವಿನ ಮನಸ್ತಾಪ ಹೋಗಲಾಡಿಸಲು ಮಾತುಕತೆ ನಡೆಸಿದ್ದರು. ಯೋಧ ಗುರು ಹುತಾತ್ಮರಾದ ನಂತರ ಗುಡಿಗೆರೆ ಕಾಲೋನಿ ದೇಶದಲ್ಲೇ ಸುದ್ದಿಯಾಗಿದೆ. ಹೀಗಿರುವಾಗ ನೀವು ಹಣದ ವಿಚಾರಕ್ಕೆ ಹೀಗೆ ಕಿತ್ತಾಡಿಕೊಂಡು ಬೀದಿಗೆ ಬಂದರೆ ಊರಿನ ಮರ್ಯಾದೆಯೂ ಹೊಗುತ್ತದೆ ಎಂದು ತಿಳಿಹೇಳಿದ್ದರು ಎನ್ನಲಾಗಿದೆ. ಆದರೆ ಪರಿಹಾರ ರೂಪದಲ್ಲಿ ಬಂದ ಚೆಕ್ಗಳು ಕಲಾವತಿಯವರ ಬ್ಯಾಂಕ್ ಖಾತೆಗೆ ನೇರವಾಗಿ ಸಂದಾಯವಾದರೆ, ನಗದು ರೂಪದಲ್ಲಿ ಬಂದ ಪರಿಹಾರದ ಹಣ ಗುರು ಅವರ ತಾಯಿ ಚಿಕ್ಕೋಳಮ್ಮ ಅವರಿಗೆ ಬಂದಿತ್ತು ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಹೊಗೆಯಾಡುತ್ತಿದ್ದ ದ್ವೇಷ ಇಂದು ಭುಗಿಲೆದ್ದು ಮನೆಯೊಳಗೆ ನಡೆದಿದ್ದ ಇದುವರೆಗಿನ ಜಗಳ ಇಂದು ಬೀದಿಯಲ್ಲಿ ಅನಾವರಣಗೊಂಡಿತ್ತು. ಇದಕ್ಕೆಲ್ಲ ಕಾರಣ ಹಣ ಎಂಬುದು ವಿಷಾದದ ಸಂಗತಿ. ಗಲಾಟೆಯನ್ನು ಬಿಡಿಸಲು ಗುರು ಸಹೋದರ ಮಧು ಹೆಣಗಾಡುತ್ತಿದ್ದ ದೃಶ್ಯ ಕಂಡುಬಂದಿತು. ಒಂದು ಹಂತದಲ್ಲಿ ಕಲಾವತಿಯನ್ನು ಮಧುವಿಗೆ ಮದುವೆ ಮಾಡಿಕೊಳ್ಳುವ ಇರಾದೆ ವ್ಯಕ್ತವಾಗಿತ್ತು. ಆದರೆ ಇಂದು ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡು ಜಗಳ ನಡೆಯುತ್ತಿದ್ದ ಸಂದರ್ಭದಲ್ಲೇ ಸಾಸಲಪುರದಿಂದ ಕಲಾವತಿ ಪೋಷಕರು ಕಾರಿನಲ್ಲಿ ಬಂದು ಮಗಳನ್ನು ಕರೆದೊಯ್ದರು ಎಂದು ತಿಳಿದುಬಂದಿದೆ.
ಆದರೆ ಅತ್ತೆ ಚಿಕ್ಕೋಳಮ್ಮ ಮಾತ್ರ ಏನೋ ನಡೆದೇ ಇಲ್ಲ ಎಂಬಂತೆ ಮನೆಯೆಂದ ಮೇಲೆ ಇವೆಲ್ಲ ಸಹಜ. ಸಂಸಾರದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಇದ್ದೇ ಇರುತ್ತವೆ ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಇದೇ ವಿಚಾರವಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಕುರಿತು ಸಚಿವ ಡಿ.ಸಿ.ತಮ್ಮಣ್ಣ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿ ಇದು ಹುತಾತ್ಮ ಯೋಧನ ಕುಟುಂಬಕ್ಕೆ ಗೌರವ ತರುವಂಥ ಬೆಳವಣಿಗೆಯಲ್ಲ. ನಿಮ್ಮ ಕುಟುಂಬದ ವ್ಯತ್ಯಾಸಗಳನ್ನು ನೀವುಗಳೇ ಕುಳಿತು ಬಗೆಹರಿಸಿಕೊಳ್ಳಬೇಕು. ಹಾದಿ-ಬೀದಿ ರಂಪಾಟ ಮಾಡಿಕೊಂಡರೆ ವೀರಯೋಧನಿಗೆ ಅವಮಾನಿಸಿದಂತೆ ಎಂದು ಬುದ್ದಿಮಾತು ಹೇಳಿದ್ದರು.
ಯೋಧ ಗುರು ಪತ್ನಿ ಕಲಾವತಿ ಅವರ ಬ್ಯಾಂಕ್ ಖಾತೆ ವಿವರ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಹರಿದಾಡಿದ ನಂತರ ಜನರು ಸಹಜವಾಗಿ ಸ್ಪಂದಿಸಿದರು. ಇದರ ಮೊತ್ತವೇ ಸುಮಾರು 15 ಕೋಟಿ ರೂ. ಎನ್ನಲಾಗಿದೆ. ವಿದೇಶಿ ಉದ್ಯಮಿಯೊಬ್ಬರು 1 ಕೋಟಿ ಹಣ ರೂ., ರಾಜ್ಯ ಸರ್ಕಾರ 25 ಲಕ್ಷ ರೂ., ಅಂಬಾನಿ ಕಂಪನಿಯಿಂದ 25 ಲಕ್ಷ, ಇನ್ಫೊಸಿಸ್ ಫೌಂಡೇಷನ್ನಿಂದ 10 ಲಕ್ಷ, ನ್ಯಾಷನಲ್ ಟ್ರ್ಯಾವಲ್ಸ್ನ ಮಾಲಕ, ಸಚಿವ ಝಮೀರ್ ಅಹ್ಮದ್ ಖಾನ್ 10 ಲಕ್ಷ, ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ 10 ಲಕ್ಷ, ಕಾಂಗ್ರೆಸ್, ಜಾ.ದಳ, ಬಿಜೆಪಿ ನಾಯಕರು ಸೇರಿದಂತೆ ದಾನಿಗಳು ಸಾಕಷ್ಟು ಪರಿಹಾರ ನೀಡಿದ್ದಾರೆ.
ಅಲ್ಲದೆ ಅಂಬರೀಶ್ ಪತ್ನಿ ಸುಮಲತಾ 20 ಗುಂಟೆ ಜಮೀನು ಕೊಡುಗೆಯಾಗಿ ನೀಡಿದ್ದರು. ಇದರ ಜತೆಗೆ ಶಾಲಾ ಮಕ್ಕಳು, ಶಿಕ್ಷಕರು, ವಕೀಲರು, ಎಲ್ಐಸಿ ಪ್ರತಿನಿಧಿಗಳು, ಸಾರ್ವಜನಿಕರು ಕೂಡ ಯಥಾಶಕ್ತಿ ಧನ ಸಹಾಯ ಮಾಡಿದ್ದರು. ಈ ಹಣವೇ ಕುಟುಂಬ ಸದಸ್ಯರ ಸಂಬಂಧಕ್ಕೆ ಮುಳುವಾಗಿದೆ ಎನ್ನಲಾಗಿದೆ.