ಕೊಡಗು ಜಳ ಪ್ರಳಯ: ಭರದಿಂದ ಸಾಗಿದೆ ನೂತನ ಮನೆಗಳ ನಿರ್ಮಾಣ ಕಾರ್ಯ
► ಸಂತ್ರಸ್ತರಲ್ಲಿ ಮೂಡಿದೆ ಆಶಾಭಾವನೆ ►ಮಳೆಗಾಲಕ್ಕೂ ಮೊದಲು 400 ಮನೆಗಳ ಹಸ್ತಾಂತರ ಸಾಧ್ಯತೆ
ಮಡಿಕೇರಿ, ಎ.23: ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಗೆ ವಾಸದ ಮನೆ ಹಾಗೂ ಜೀವನ ನಿರ್ವಹಣೆಯ ಭೂಮಿಯನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದ ವಿವಿಧ ಗ್ರಾಮಗಳ ಸುಮಾರು 840 ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸುವ ಕಾರ್ಯ ಭರದಿಂದ ಸಾಗಿದೆ.
ಪ್ರಾಕೃತಿಕ, ಆರ್ಥಿಕ ಮತ್ತು ತಾಂತ್ರಿಕ ಕಾರಣಗಳಿಂದ ನಿರೀಕ್ಷಿತ ವೇಗದಲ್ಲಿ ನೂತನ ಮನೆಗಳ ನಿರ್ಮಾಣ ಕಾರ್ಯ ನಡೆಯದಿದ್ದರೂ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಸಂತ್ರಸ್ತರಲ್ಲಿ ಹೊಸ ಆಶಾಭಾವನೆ ಮೂಡಲಾರಂಭಿಸಿದೆ. ಮಳೆಗಾಲಕ್ಕೂ ಮೊದಲು ಸುಮಾರು 400 ಕುಟುಂಬಗಳಿಗಾದರೂ ನೂತನ ಮನೆಗಳನ್ನು ಹಸ್ತಾಂತರಿಸಬೇಕೆನ್ನುವ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ. ಇದಕ್ಕೆ ಸರಕಾರ ನೆರವೂ ದೊರೆಯುತ್ತಿದೆ.
840 ಮನೆಗಳ ಪೈಕಿ 770 ಮನೆಗಳನ್ನು ತುರ್ತಾಗಿ ನಿರ್ಮಿಸಲು ಕರ್ನಾಟಕ ಹ್ಯಾಬಿಟೇಟ್ ಸಂಸ್ಥೆಗೆ ಜವಾಬ್ದಾರಿ ವಹಿಸಲಾಗಿದೆ. ಕರ್ಣಂಗೇರಿ 40, ಬಿಳಿಗೇರಿ 30, ಗಾಳಿಬೀಡು 125, ಮದೆನಾಡು 175, ಜಂಬೂರು ಗ್ರಾಮದಲ್ಲಿ 400 ಸೇರಿದಂತೆ ಒಟ್ಟು 770 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ಮನೆಗೆ 9.85 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದ್ದು, ಈ ಮನೆಗಳು ಸಂಪೂರ್ಣ ಕಾಂಕ್ರಿಟ್ ಮೋಲ್ಡ್ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಮಾತ್ರವಲ್ಲದೇ, ಅಗ್ನಿ ಅವಘಡ, ಭೂಕಂಪ ನಿರೋಧಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಪ್ರವಾಹ ಮತ್ತು ಭೂ ಕುಸಿತದಿಂದ ಮನೆಗಳನ್ನು ಕಳೆದುಕೊಂಡವರಿಗೆ ಈಗಾಗಲೇ ತಿಂಗಳಿಗೆ 10 ಸಾವಿರ ರೂ.ಯಂತೆ 480 ಕುಟುಂಬಗಳಿಗೆ ಪ್ರತಿ ತಿಂಗಳು 48 ಲಕ್ಷ ರೂ. ಬಾಡಿಗೆ ರೂಪದಲ್ಲಿ ಸರಕಾರ ಭರಿಸುತ್ತಿದೆ. ಮನೆಗಳ ಹಸ್ತಾಂತರ ಕಾರ್ಯ ಆಗುವವರೆಗೆ ಸಂತ್ರಸ್ತರು ತಾತ್ಕಾಲಿಕವಾಗಿ ವಾಸವಿರುವ ಮನೆಗಳ ಬಾಡಿಗೆ ಹಣವನ್ನು ಸರಕಾರವೇ ಪಾವತಿಸಲಿದೆ. ಇದು ನೊಂದ ಕುಟುಂಬಗಳಿಗೆ ಹೆಚ್ಚು ಸಹಕಾರಿಯಾಗಿದೆ.
ಮಡಿಕೇರಿ ಸಮೀಪದ ಕರ್ಣಂಗೇರಿ ಗ್ರಾಮದಲ್ಲಿ 38 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಈ ಮನೆಗಳ ಕೆಲಸ ಶೇ.90ರಷ್ಟು ಪೂರ್ಣಗೊಂಡಿದೆ. ಮೂಲಭೂತ ಸೌಲಭ್ಯಗಳಾದ ರಸ್ತೆ, ವಿದ್ಯುತ್, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಒದಗಿಸಬೇಕಿದೆ. ಮದೆನಾಡು ಗ್ರಾ.ಪಂ. ವ್ಯಾಪ್ತಿಯ ಗೋಳಿಕಟ್ಟೆ ಬಳಿ 80 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, 40 ಮನೆಗಳ ಅಡಿಪಾಯ ಕಾಮಗಾರಿ ಮುಕ್ತಾಯಗೊಂಡಿದೆ. ಅಲ್ಲದೇ, ಸುಮಾರು 40 ಮನೆಗಳ ಕೆಲಸ ಭಾಗಶ: ಪೂರ್ಣ ಹಂತಕ್ಕೆ ತಲಪಿದ್ದು, ಅಲ್ಲಿಯೂ ಕೂಡ ಮೂಲಭೂತ ಸೌಕರ್ಯದ ಕೆಲಸ ಕಾರ್ಯಗಳು ನಡೆಯಬೇಕಿದೆ. ಮನೆಗಳಿಗೆ ಕಿಟಕಿ, ಬಾಗಿಲುಗಳನ್ನು ಇನ್ನಷ್ಟೇ ಅಳವಡಿಸಬೇಕಿದೆ.
ಮಾದಾಪುರ ಬಳಿಯ ಜಂಬೂರು ಗ್ರಾಮದಲ್ಲಿ 318 ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಮೊದಲ ಹಂತದಲ್ಲಿ 55 ಮನೆಗಳನ್ನು ಪೂರ್ಣಗೊಳಿಸಿ ಕಿಟಕಿ, ಬಾಗಿಲುಗಳ ಸಹಿತ ಮೂಲಭೂತ ಸೌಲಭ್ಯ ಒದಗಿಸಲಾಗುತ್ತಿದೆ. ಉಳಿದ ಮನೆಗಳ ಅಡಿಪಾಯ ನಿರ್ಮಿಸಿದ್ದು, ಹಂತ ಹಂತವಾಗಿ ಕಾಮಗಾರಿ ಪ್ರಗತಿ ಸಾಧಿಸಲಿದೆ ಜಿಲ್ಲಾಡಳಿತ ಹೇಳಿದೆ. ಇನ್ಫೋಸಿಸ್ನಿಂದ 200 ಮನೆಗಳ ನಿರ್ಮಾಣ ಜಂಬೂರುವಿನ ಈ ನಿವೇಶನದಲ್ಲಿ ಕರ್ನಾಟಕ ಸರಕಾರದ ನಿರ್ದೇಶನದಂತೆ 200 ಮನೆಗಳನ್ನು ಇನ್ಫೋಸಿಸ್ ಸಂಸ್ಥೆಯಿಂದ ಸಂತ್ರಸ್ತರಿಗೆ ನಿರ್ಮಿಸಿ ಕೊಡುವ ಒಡಂಬಡಿಕೆ ನಡೆದಿದೆ. ಈ ಹಿನ್ನಲೆಯಲ್ಲಿ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥರು ಮಾರ್ಚ್ 25ರಂದು ಅಲ್ಲಿ ಭೂಮಿಪೂಜೆ ನೆರವೇರಿಸಿ, ಮನೆ ನಿರ್ಮಾಣದ ಕಾಮಗಾರಿಯನ್ನು ಆರಂಭಿಸಿದ್ದಾರೆ.
ಕರ್ಣಂಗೇರಿಯಲ್ಲಿ ನಿರ್ಮಿಸುತ್ತಿರುವ 38 ಮನೆಗಳು ಹಾಗೂ ಮದೆನಾಡು ಸಮೀಪದ ಗೋಳಿಕಟ್ಟೆಯಲ್ಲಿ 80 ಮನೆಗಳ ಕಾಮಗಾರಿಯನ್ನು ಮೊದಲ ಹಂತವಾಗಿ ಮೇ ಅಂತ್ಯಕ್ಕೆ ಪೂರ್ಣಗೊಳಿಸಲಾಗುತ್ತದೆ. ಜೂನ್ ಅಂತ್ಯಕ್ಕೆ ಮಾದಾಪುರ ಬಳಿ ಜಂಬೂರುವಿನ ಮನೆಗಳ ಸಹಿತ ಒಟ್ಟು 423 ಮನೆಗಳ ಕೆಲಸ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಡಳಿತ ವಿಶ್ವಾಸ ವ್ಯಕ್ತಪಡಿಸಿದೆ.
ಮುಗಿಯದ ಆತಂಕ
ಕರ್ನಾಟಕ ರಾಜ್ಯ ರಾಜೀವ್ ಗಾಂಧಿ ಪುನರ್ವಸತಿ ನಿಗಮದಿಂದ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದ್ದು, ಮೊದಲ ಹಂತದಲ್ಲಿ 400 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕಿದೆ. ಆದರೆ, ಜಿಲ್ಲೆಯಲ್ಲಿ ಈಗಾಗಲೇ ಅಲ್ಲಲ್ಲಿ ಮಳೆ ಬೀಳಲು ಪ್ರಾರಂಭವಾಗಿದ್ದು, ಸಂತ್ರಸ್ತ ಗ್ರಾಮಗಳ ಗ್ರಾಮಸ್ಥರ ನಿದ್ದೆಗೆಡಿಸಿದೆ. ಪ್ರಸಕ್ತ ಮುಂಗಾರು ಮಳೆ ಸಮೀಪಿಸುತ್ತಿದ್ದರೂ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳದಿರುವ ಬಗ್ಗೆ ಆತಂಕ ಮೂಡಿದೆ.
ಹವಾಮಾನ ಇಲಾಖೆ ಮತ್ತು ಭೂವಿಜ್ಞಾನಿಗಳ ಸಲಹೆ ಪಡೆದು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕು ಎಂದು ಸಂತ್ರಸ್ತರು ಮನವಿ ಮಾಡಿದ್ದಾರೆ. ಅನಾಹುತ ಸಂಭವಿಸುವ ಮೊದಲೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮನ್ವಯತೆಯನ್ನು ಕಾಯ್ದುಕೊಂಡು ಸಂತ್ರಸ್ತರ ಪರವಾಗಿ ಕಾರ್ಯನಿರ್ವಹಿಸಬೇಕು ಮತ್ತು ಉಳಿದ ಗ್ರಾಮಸ್ಥರ ಬಗ್ಗೆ ಕಾಳಜಿ ತೋರಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಣ್ಣ ಮಳೆಗೂ ಬೆಟ್ಟ ಶ್ರೇಣಿಗಳು ಕುಸಿದು ಬೀಳುವ ಸಾಧ್ಯತೆ
ಭೂಕುಸಿತಕ್ಕೊಳಗಾದ ಹಾಗೂ ನದಿ ಪ್ರವಾಹ ಉಕ್ಕೇರಿದ ಪ್ರದೇಶ ಮತ್ತು ಗ್ರಾಮಗಳು ಅಪಾಯದಿಂದ ಇನ್ನೂ ಪಾರಾಗಿಲ್ಲ. ಈ ಹಿಂದೆ ಭೂ ಕುಸಿತವಾದ ಬೆಟ್ಟ ಶ್ರೇಣಿಗಳಲ್ಲಿ ಭಾರೀ ಬಿರುಕುಗಳಿದ್ದು, ಮೊದಲ ಮಳೆಗೆ ಈ ಬಿರುಕಿಗೆ ನೀರು ಸೇರಿದರೆ ಮತ್ತೆ ಈ ಬೆಟ್ಟ ಶ್ರೇಣಿಗಳು ಕುಸಿದು ಹಾನಿ ಸಂಭವಿಸುವ ಭಯದ ವಾತಾವರಣವಿದೆ. ಮಳೆಗಾಲದಲ್ಲಿ ಉಕ್ಕಿ ಹರಿಯುವ ನದಿ ನೀರಿಗೆ ಭೂ ಕುಸಿದು ಬಿದ್ದರೆ, ನೀರಿನ ಹರಿವಿಗೆ ತಡೆಯೊಡ್ಡಿದಂತಾಗಿ ಭಾರೀ ಪ್ರವಾಹವೂ ತಲೆದೋರುವ ಸಾಧ್ಯತೆಗಳಿವೆ. ಈಗಾಗಲೇ ನದಿ ತೊರೆಗಳಲ್ಲಿ ಭಾರೀ ಪ್ರಮಾಣದ ಹೂಳು ತುಂಬಿದ್ದು, ಮಳೆಗಾಲದ ಆರಂಭದಲ್ಲೇ ಪ್ರವಾಹ ಪರಿಸ್ಥಿತಿ ಎದುರಾಗಬಹುದು ಎನ್ನುವ ಆತಂಕವನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಾರೆ.
ಜೋಡುಪಾಲ, ಮೊಣ್ಣಂಗೇರಿ, ಮದೆನಾಡು, ತಂತಿಪಾಲ, ಹೆಮ್ಮೆತಾಳು, ಮೇಘತ್ತಾಳು, ಕಾಲೂರು, ಹೆಬ್ಬೆಟ್ಟಗೇರಿ, ಸೇರಿದಂತೆ ಈ ಹಿಂದೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಗ್ರಾಮಗಳ ನಿವಾಸಿಗಳಲ್ಲಿ ಇಂದಿಗೂ ಆತಂಕದ ಕಾರ್ಮೋಡ ಕವಿದಿದ್ದು, ಈಗ ಸುರಿಯುತ್ತಿರುವ ಅಲ್ಪ ಮಳೆಗೆ ಜೀವ ಕೈಯಲ್ಲಿ ಹಿಡಿದುಕೊಂಡು ದಿನ ಕಳೆಯುತ್ತಿದ್ದಾರೆ.