ಮೇಲಾಧಿಕಾರಗಳ ಕಿರುಕುಳ ಆರೋಪ: ಯುವಕ ಆತ್ಮಹತ್ಯೆ
ಹಾಸನ, ಎ.23: ಖಾಸಗಿ ಕಂಪೆನಿಯ ಮೇಲಾಧಿಕಾರಗಳ ಕಿರುಕುಳಕ್ಕೆ ಯುವಕನೋರ್ವ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ.
ನಗರದ ಹೊರವಲಯ ರಿಂಗ್ ರಸ್ತೆ ಬಳಿ ಇರುವ ವಿಶಾಲ್ ಮಾರ್ಟ್ನಲ್ಲಿ ಕೆಲಸ ಮಾಡುತ್ತಿರುವ ವಿದ್ಯಾನಗರ ನಿವಾಸಿ ಪ್ರಮೋದ್ (23) ಎಂಬವರು ಆತ್ಮಹತ್ಯೆ ಮಾಡಿಕೊಂಡ ಯುವಕ. ಕೆಲಸ ನಿರ್ವಹಿಸುವಾಗ ಕಂಪೆನಿಯ 60 ಸಾವಿರ ರೂ. ಹಣವನ್ನು ಪ್ರಮೋದ್ ದುರಪಯೋಗಪಡಿಸಿಕೊಂಡಿದ್ದಾನೆ ಎಂದು ಕಂಪೆನಿಯಲ್ಲಿರುವ ಆತನ ಸಹದ್ಯೋಗಿಗಳಾದ ಮ್ಯಾನೇಜರ್ ಕಿರಣ್, ಜುನೈದ್ ಮತ್ತು ಆದಿಲ್ ಎಂಬವರು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಮೃತ ಯುವಕನ ಪೋಷಕರು ದೂರಿದ್ದಾರೆ.
ಸುಳ್ಳು ಆರೋಪದಿಂದ ಬೇಸತ್ತಿದ್ದ ಪ್ರಮೋದ್ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಕಳೆದ 7 ದಿನಗಳ ಹಿಂದೆ ವಿಷ ಸೇವನೆ ಮಾಡಿದ್ದಾನೆ ಎನ್ನಲಾಗಿದೆ. ತಕ್ಷಣ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಆದರೆ, ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ಕೊನೆಉಸಿರು ಎಳೆದಿದ್ದಾನೆ. ನನ್ನ ಮಗನ ಸಾವಿಗೆ ಕಂಪೆನಿ ಸಿಬ್ಬಂದಿಯೇ ಕಾರಣ. ಕೂಡಲೇ ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಪೋಷಕರು ಮಾಡಿದ್ದಾರೆ.
ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.