ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಮೈಸೂರಿನ 14 ಮಂದಿ ಸುರಕ್ಷಿತ
ಮೈಸೂರು, ಎ.23: ಶ್ರೀಲಂಕಾದಲ್ಲಿ ಚರ್ಚ್ ಮೇಲೆ ನಡೆದ ದಾಳಿಯಲ್ಲಿ ನೂರಾರು ಮಂದಿ ಹತರಾಗಿದ್ದಾರೆ. ರಾಜ್ಯದ 8 ಪ್ರವಾಸಿಗರು ಸಹ ದುರ್ಮರಣ ಹೊಂದಿದ್ದಾರೆ. ಇದರ ಬೆನ್ನಲ್ಲೇ ಮೈಸೂರಿನಿಂದ ಪ್ರವಾಸಕ್ಕೆ ತೆರಳಿದ್ದ ಐದು ಮಂದಿ ಭೂಗರ್ಭಶಾಸ್ತ್ರಜ್ಞರು ಸೇರಿದಂತೆ ಒಟ್ಟು 14 ಮಂದಿ ಸುರಕ್ಷಿತವಾಗಿದ್ದಾರೆ ಎಂಬ ಸುದ್ದಿ ಬಂದಿದೆ.
ದಿವಾನ್ಸ್ ರಸ್ತೆಯಲ್ಲಿರುವ ಥಾಮಸ್ ಕುಕ್(ಇಂಡಿಯಾ) ಟ್ರಾವೆಲ್ಸ್ ಮೂಲಕ 6 ದಿನಗಳ ಶ್ರೀಲಂಕಾ ಪ್ರವಾಸಕ್ಕೆ ಇವರು ತೆರಳಿದ್ದರು. ಇವರಲ್ಲಿ ಪ್ರತಿಷ್ಠಿತ ಭೂಗರ್ಭಶಾಸ್ತ್ರಜ್ಞ ಎಂ.ವಿ.ರವಿಶಂಕರ್ ಕೆ.ವಿ.ವೇದಮೂರ್ತಿ, ಚನ್ನಬಸಪ್ಪ, ವಿನಯ್ ರಂಗನಾಥ್, ಎಚ್.ಎನ್. ಉಮೇಶ್ ಸೇರಿದಂತೆ ಈ ಐವರ ಕುಟುಂಬ ಸದಸ್ಯರಾದ ಶೈಲಾ, ಮೌನಾ ಉಮೇಶ್, ಪೂರ್ಣಿಮಾ ರವಿಶಂಕರ್, ಅನುಪ್ ರವಿಶಂಕರ್, ಬಿ.ಎಸ್.ಶಾಲಿನಿ, ಸ್ವರೂಪ, ಗೌತಮಿ ವೇದಮೂರ್ತಿ ಹಾಗೂ ಸನತ್ ರಂಗನಾಥ್ ಸದ್ಯ ಸರಣಿ ಬಾಂಬ್ ಸ್ಫೋಟ ಸಂಭವಿಸಿರುವ ಕೊಲಂಬೋದಿಂದ 40 ಕಿ.ಮೀ. ದೂರದಲ್ಲಿರುವ ಬೆಂಟೋಟಾದ ಹಿಬಿಸ್ಕಸ್ ಹೋಟೆಲ್ನಲ್ಲಿ ಸುರಕ್ಷಿತವಾಗಿರುವುದು ಖಚಿತವಾಗಿದೆ.
ಎ.19ರಂದು ಮುಂಜಾನೆ ಬೆಂಗಳೂರಿನಿಂದ ವಿಮಾನದ ಮೂಲಕ ಶ್ರೀಲಂಕಾದ ಕೊಲಂಬೊ ತಲುಪಿದ ಇವರು, ಪಿನ್ನವಾಲಾಕ್ಕೆ ತೆರಳಿ, ಕ್ಯಾಂಡಿಯಲ್ಲಿ ವಾಸ್ತವ್ಯ ಹೂಡಿದ್ದರು. ಎ.20 ರಂದು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ, ವಾಪಸ್ ಕ್ಯಾಂಡಿಗೆ ಮರಳಿದ್ದರು.
ಕ್ಯಾಂಡಿಯಿಂದ ಬೆಂಟೋಟಾಗೆ ಪ್ರಯಾಣ ಬೆಳೆಸಿ, ಅಲ್ಲಿನ ಹಿಬಿಸ್ಕಸ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಪ್ರವಾಸ ಪಟ್ಟಿಯಂತೆ ಇಂದು ಬೆಂಟೋಟಾದಿಂದ ಗಲ್ಲೇಗೆ ಇಂದು ಕೊಲೊಂಬೋಗೆ ತೆರಳಿ, ಎ.24ಕ್ಕೆ ಬೆಂಗಳೂರಿಗೆ ವಾಪಸಾಗಬೇಕಿತ್ತು. ಆದರೆ ಕೊಲಂಬೋದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ್ದರಿಂದ ಬೆಂಟೋಟಾ ದಿಂದ ಪ್ರವಾಸ ಮುಂದುವರಿಸಲು ಸಾಧ್ಯವಾಗಿಲ್ಲ. ಅದೃಷ್ಟವಶಾತ್ ಯಾವುದೇ ಅಪಾಯಕ್ಕೆ ಸಿಲುಕಿಲ್ಲ.