ಶ್ರೀಲಂಕಾ ಸರಣಿ ಸ್ಫೋಟದಲ್ಲಿ ಮಡಿದ ಜೆಡಿಎಸ್ ಕಾರ್ಯಕರ್ತರ ಅಂತಿಮ ದರ್ಶನ ಪಡೆದ ಕುಮಾರಸ್ವಾಮಿ, ದೇವೇಗೌಡ
ಬೆಂಗಳೂರು, ಎ. 24: ಶ್ರೀಲಂಕಾದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಸಾವಿಗೀಡಾದ ಐವರು ಕನ್ನಡಿಗರ ಮೃತದೇಹ ನಿನ್ನೆ ರಾತ್ರಿ ಬೆಂಗಳೂರಿಗೆ ತಂದಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಮೃತರ ಅಂತಿಮ ದರ್ಶನ ಪಡೆದು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಬುಧವಾರ ಇಲ್ಲಿನ ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜೆಡಿಎಸ್ ಮುಖಂಡರಾದ ಕೆ.ಜಿ.ಹನುಮಂತರಾಯಪ್ಪ, ಎಂ.ರಂಗಪ್ಪ ಅವರ ಅಂತಿಮ ದರ್ಶನ ಪಡೆದ ಉಭಯ ನಾಯಕರು ಗೌರವ ಸಮರ್ಪಿಸಿದ್ದಾರೆ. ಭಯೋತ್ಪಾದನೆ ಜಾಗತಿಕ ಪಿಡುಗು, ಇದರಿಂದ ಆತಂಕ ಹೆಚ್ಚುತ್ತಿದೆ. ಭಯೋತ್ಪಾದನೆಯನ್ನು ಬುಡಸಮೇತ ತೊಲಗಿಸುವವರೆಗೆ ಶಾಂತಿ ನೆಲೆಸುವುದಿಲ್ಲ. ಉಗ್ರಗಾಮಿ ಚಟುವಟಿಕೆಯನ್ನು ನಿರ್ನಾಮ ಮಾಡಲು ಎಲ್ಲರೂ ಒಗ್ಗಟ್ಟಾಗಿ ಕೈಜೋಡಿಸಬೇಕು ಎಂದು ದೇವೇಗೌಡ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಮಡಿದ ನಮ್ಮ ಪಕ್ಷದ ಕಾರ್ಯಕರ್ತರಾದ ರಂಗಪ್ಪ ಮತ್ತು ಹನುಮಂತರಾಯಪ್ಪರ ಅಂತಿಮ ದರ್ಶನವನ್ನು ಪಡೆದಿದ್ದೇನೆ. ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದೇನೆ. ಪಕ್ಷಕ್ಕೆ ಹಾಗೂ ಸಮಾಜಕ್ಕೆ ಈ ಇಬ್ಬರ ಕೊಡುಗೆಯೂ ಮಹತ್ವದ್ದು’
-ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ