ಪ್ರತ್ಯೇಕ ಧರ್ಮದ ಹೋರಾಟಗಾರರ ನಿಂದನೆ ಆರೋಪ: ಬಿಜೆಪಿ ಮುಖಂಡನ ಪತ್ನಿ ಬಂಧನ
ಧಾರವಾಡ/ಬೆಂಗಳೂರು, ಎ.24: ಲಿಂಗಾಯುತ ಪ್ರತ್ಯೇಕ ಧರ್ಮ ಹೋರಾಟಗಾರರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮಾಡಿರುವ ಆರೋಪದಡಿ ಬಿಜೆಪಿ ಮುಖಂಡನ ಪತ್ನಿಯನ್ನು ಇಲ್ಲಿನ ಧಾರವಾಡ ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಧಾರವಾಡ ತಾಲೂಕಿನ ಗರಗ ಗ್ರಾಮದ ಶೃತಿ ಬೆಳ್ಳಕ್ಕಿ ಎಂಬುವರನ್ನು ಬಂಧಿಸಿದ್ದು, ಈಕೆ ಧಾರವಾಡ ಜಿಲ್ಲಾ ಬಿಜೆಪಿ ಗ್ರಾಮೀಣ ಉಪಾಧ್ಯಕ್ಷ ಪರಮೇಶ್ ಉಳ್ಳವಣ್ಣ ಅವರ ಪತ್ನಿ ಎಂದು ತಿಳಿದುಬಂದಿದೆ.
ಪ್ರತ್ಯೇಕ ಧರ್ಮ ವಿಚಾರವಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಬರೆದಿದ್ದಾರೆ ಎನ್ನಲಾದ ಸುಳ್ಳು ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿದ್ದಲ್ಲದೆ, ನಿಂದನೆ ಮಾಡಿದ್ದರು. ಈ ಸಂಬಂಧ ಆರೋಪಿ ಶೃತಿ ಬೆಳ್ಳಕ್ಕಿ ವಿರುದ್ಧ ಧಾರವಾಡ ತಾಲೂಕ್ ಪಂಚಾಯತ್ ಮಾಜಿ ಅಧ್ಯಕ್ಷ ದಶರಥ ದೇಸಾಯಿ ಅವರು ಪೊಲೀಸರಿಗೆ ದೂರು ನೀಡಿದ್ದರು.
ಜಾಮೀನು ರಹಿತ: ಶೃತಿ ಬೆಳ್ಳಕ್ಕಿ ವಿರುದ್ಧ ಗರಗ ಠಾಣೆಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಾಗಿದೆ. ಆರೋಪಿ ಬಂಧನದ ಹಿಂದೆ ಗೃಹ ಸಚಿವ ಎಂ.ಬಿ.ಪಾಟೀಲ್ ಕೈವಾಡ ಇಲ್ಲ ಎಂದು ಧಾರವಾಡ ಎಸ್ಪಿ ಜಿ.ಸಂಗೀತಾ ತಿಳಿಸಿದ್ದಾರೆ