ಮುಂಡಗೋಡುವಿನಲ್ಲಿ ಭಾರೀ ಗಾಳಿ ಮಳೆ: ಅಪಾರ ಕೃಷಿ ನಾಶ, 5000 ಕೋಳಿಗಳ ಸಾವು
ಮುಂಡಗೋಡ, ಎ.28: ಗುಡುಗು ಸಿಡಿಲು ಸಹಿತ ಭಾರೀ ಗಾಳಿಯೊಂದಿಗೆ ಸುರಿದ ಮಳೆಯಿಂದ ತಾಲೂಕಿನ ವಿವಿಧಡೆ ಅಪಾರ ನಾಶನಷ್ಟ ಸಂಭವಿಸಿರುವ ಘಟನೆ ಶನಿವಾರ ಸಂಜೆ ಸಂಭವಿಸಿದೆ.
ಹಲವೆಡೆ ಆಸ್ತಿಪಾಸ್ತಿ, ತೋಟದ ಬೆಳೆಗಳು ಹಾಗೂ ಸಿಡಿಲಿನ ಹೊಡೆತಕ್ಕೆ ಎತ್ತು ಮೃತಪಟ್ಟು, ಕೋಳಿ ಫಾರ್ಮ್ ನಾಶವಾಗಿದೆ.
ಅರಶಿಣಗೇರಿ ಗ್ರಾಮದಲ್ಲಿ ಹಝ್ರತ್ ಅಲಿ ಎಂಬವರಿಗೆ ಸೇರಿದ ಕೋಳಿ ಫಾರ್ಮ್ ಶೆಡ್ ಗಾಳಿಯಬ್ಬರಕ್ಕೆ ಸಿಲುಕಿ ಕುಸಿದಿದೆ. ಇದರಿಂದ ಸುಮಾರು 5000 ಕೋಳಿಗಳು ಮೃತಪಟ್ಟಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಅದೇ ಗ್ರಾಮದಲ್ಲಿ ರಾಮಣ್ಣ ಲಮಾಣಿ ಎಂಬವರಿಗೆ ಸೇರಿದ 4 ಎಕರೆ ಗದ್ದೆಯಲ್ಲಿ ಬೆಳೆದ ಮಾವು ಹಾಗೂ ಅಡಿಕೆ ಬಾಳೆ ಭಾಗಶಃ ನೆಲಕಚ್ಚಿವೆ. ಗ್ರಾಮದಲ್ಲಿ ಸುಮಾರು ಮನೆಗಳ ಮೇಲ್ಛಾವಣಿಗಳು ಹಾರಿಹೋಗಿವೆ. ಗ್ರಾಮದ ಇತರಡೆಗಳಲ್ಲೂ ಹಾನಿ ಸಂಭವಿಸಿದ್ದು, ಮಾವು, ಗೋವಿನ ಜೋಳ ಬೆಳೆ ನೆಲಕಚ್ಚಿವೆ. ಶುಂಠಿ ಬೆಳೆ ನೀರುಪಾಲಾಗಿದೆ.
ಹುನಗುಂದ ಗ್ರಾಮದಲ್ಲಿ ಹೊಲದಲ್ಲಿದ್ದ ಗುರುಸಿದ್ದಯ್ಯ ಕಂದಿ ಎಂಬವರ ಎತ್ತು ಸಿಡಿಲಿನ ಆಘಾತಕ್ಕೆ ಸಿಲುಕಿ ಹಸುನೀಗಿದೆ. ಫಕೀರಪ್ಪಬಿಸನ್ನಳ್ಳಿ ಎಂಬವರ ಮನೆ ಮೇಲೆ ತೆಂಗಿನಮರ ಬಿದ್ದು ಹಾನಿಯುಂಟಾಗಿದೆ. ಗ್ರಾಮದ ಸುಮಾರು ಮನೆಗಳ ಮೇಲ್ಛಾವಣಿ ಹಾರಿಹೋಗಿವೆ ನಷ್ಟವುಂಟಾಗಿದೆ. ಬಾಚಣಿಕೆ ಗ್ರಾಮದ ಹುಬ್ಬಳ್ಳಿ ಶಿರಸಿ ರಸ್ತೆಯಲ್ಲಿ ಮರವೊಂದು ರಸ್ತೆಗೆ ಉರುಳಿಬಿದ್ದ ಪರಿಣಾಮ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.