ಆಯುರ್ವೇದಿಕ್ ಚಿಕಿತ್ಸೆಗೆ ಹೋದದ್ದನ್ನೇ ಮೋಜು ಮಸ್ತಿ ಅಂದರೆ ಹೇಗೆ: ಮಾಧ್ಯಮಗಳಿಗೆ ಎಚ್.ವಿಶ್ವನಾಥ್ ಪ್ರಶ್ನೆ
ಬೆಂಗಳೂರು, ಎ.30: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ಆಯುರ್ವೇದಿಕ್ ಚಿಕಿತ್ಸೆ ಪಡೆಯುತ್ತಿದ್ದಾರೆಯೆ ಹೊರತು ಮೋಜು ಮಸ್ತಿ ಮಾಡುತ್ತಿಲ್ಲವೆಂದು ಜೆಡಿಎಸ್ ರಾಜ್ಯಾಧ್ಕಕ್ಷ ಎಚ್.ವಿಶ್ವನಾಥ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಾಯಕರು ಕಳೆದ ಮೂರು ತಿಂಗಳು ಬಿಡುವಿಲ್ಲದೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಹೀಗಾಗಿ ವಿಶ್ರಾಂತಿಗಾಗಿ ಉಡುಪಿಯ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದನ್ನೆ ಕೆಲವರು ಮೋಜು ಮಸ್ತಿ ಅಂದರೆ ಹೇಗೆ ಎಂದು ಪ್ರಶ್ನಿಸಿದರು.
ಶಾಸಕ ಎಸ್.ಟಿ.ಸೋಮಶೇಖರ್ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುರಿತು ಬೇಕಾಬಿಟ್ಟಿಯಾಗಿ ಮಾತನಾಡಬಾರದು. ಮಾತನಾಡಲೇಬೇಕೆಂಬ ಹಪಹಪಿಯಲ್ಲಿ ಬೇಡದ ವಿಷಯವನ್ನು ಮಾತನಾಡಿದರೆ ಸಮಸ್ಯೆಗಳು ಉಂಟಾಗುತ್ತವೆ. ಅವರು ಬೇಕಿದ್ದರೆ ಎಲ್ಲಿಗೆ ಬೇಕಾದರು ಹೋಗಲಿ. ನಾವು ಅವರನ್ನು ಪ್ರಶ್ನಿಸುವುದಿಲ್ಲವೆಂದು ಅವರು ಹೇಳಿದರು.
ನಟ ದರ್ಶನ್ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಜಾರಿಗೊಳಿಸಿ ಎಂದು ಹೇಳಿಕೆ ನೀಡಿರುವುದು ಅವರ ಅಜ್ಞಾನವನ್ನು ತೋರಿಸುತ್ತದೆ. ಈಗಾಗಲೆ ರಾಜ್ಯದಲ್ಲಿ ಬೆಂಬಲ ಬೆಲೆ ಜಾರಿಯಲ್ಲಿದೆ. ಇದನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿ ಎಂದು ಹೇಳಬೇಕಿತ್ತು. ಈ ರೀತಿ ತಪ್ಪು, ತಪ್ಪಾಗಿ ಹೇಳಿಕೆ ನೀಡುವುದು ಸರಿಯಲ್ಲವೆಂದು ಅವರು ಹೇಳಿದರು.