‘ಮೋದಿ ವಿರುದ್ಧ ಮಾತನಾಡುವ ನೀನು ಬಾ ಮಗನೇ, ನಿನಗೆ ಒದಿತೀವಿ’
ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಯಬಿಟ್ಟ ಈಶ್ವರಪ್ಪ
ಹುಬ್ಬಳಿ, ಮೇ 5: ‘ಕಾಶ್ಮೀರದ ಪುಲ್ವಾಮಾ ದಾಳಿಯಾದ ಹನ್ನೊಂದು ದಿನಕ್ಕೆ ಉಗ್ರರನ್ನು ಬಲಿ ತೆಗೆದುಕೊಂಡ ದೇಶಭಕ್ತರು ನಾವು. ಇನ್ನು, ಸಿದ್ದರಾಮಯ್ಯ ನೀನು ಯಾವ ಲೆಕ್ಕ. ಪ್ರಧಾನಿ ಮೋದಿ ಬಗ್ಗೆ ಮಾತನಾಡುವ ಮಗನೇ ಬಾ, ನಿನಗೆ ಒದಿತೀವಿ’ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಏಕವಚನದಲ್ಲಿ ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಯಬಿಟ್ಟಿದ್ದಾರೆ.
ರವಿವಾರ ಕುಂದಗೋಳ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ಈಶ್ವರಪ್ಪ, ಪ್ರಧಾನಿ ಬಗ್ಗೆ ಏಕವಚನದಲ್ಲಿ ಮಾತನಾಡುವ ಇವನ ನಾಲಗೆಗೆ ಏನು ಬೀಳಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಸಿ.ಎಸ್.ಶಿವಳ್ಳಿ ಆತ್ಮಕ್ಕೆ ನಾವು ಶಾಂತಿ ಮಾಡುತ್ತೇವೆ. ಕುಂದಗೋಳ ಕ್ಷೇತ್ರ ಅಭಿವೃದ್ಧಿಗೆ ಪ್ರಮಾಣ ಮಾಡುತ್ತೇವೆ. ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎಂದು ಕೋರಿದ ಅವರು, ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಿಂಗಾಯತರು ಲಿಂಗಾಯತರನ್ನು ಮರಿಬೇಡ್ರಪ್ಪ ಅಂತಿದ್ದ. ಈಗ ಅವನ ಗ್ರಹಚಾರ ಏನು. ಜಾತಿ ಹೆಸರಿನಲ್ಲಿ ಮತ ಕೇಳುವವರು ಜಾತಿವಾದಿಗಳಲ್ಲವೇ ಎಂದು ಪ್ರಶ್ನಿಸಿದರು.
ಸಾಲಮನ್ನಾ ಹೆಸರಲ್ಲಿ ರೈತರಿಗೆ ದ್ರೋಹ ಮಾಡಿದವರು ಮಣ್ಣಿನ ಮಕ್ಕಳಲ್ಲ. ಯಾರು ನಿನ್ನನ್ನು ಮಣ್ಣಿನ ಮಗ ಎಂದು ಕರೆದರು. ಹಾಗಾದರೆ ನಾವೇನೂ ಕಲ್ಲಿನ ಮಕ್ಕಳೇ ಎಂದ ಈಶ್ವರಪ್ಪ, ನಿಜವಾದ ಮಣ್ಣಿನ ಮಗ ಬಿ.ಎಸ್.ಯಡಿಯೂರಪ್ಪ ಎಂದು ದೇವೇಗೌಡರ ಕುಟುಂಬದ ವಿರುದ್ಧ ಟೀಕಿಸಿದರು.
ಸಿದ್ದರಾಮಯ್ಯ ಯಾವುದು ಆಗೋದಿಲ್ಲ ಎಂದು ಹೇಳುತ್ತಾರೋ ಅದೇ ಆಗುತ್ತದೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದಿಲ್ಲ ಎಂದಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗೋದಿಲ್ಲ ಎಂದಿದ್ದರು. ಆದರೆ, ಅವರೇ ಮುಖ್ಯಮಂತ್ರಿ ಆಗಿದ್ದಾರೆ ಎಂದು ಲೇವಡಿ ಮಾಡಿದರು.
ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದ ವೇಳೆ ಕ್ರಮ ಕೈಗೊಳ್ಳಲು ಆಗ್ರಹಿಸಿದರೆ ಸಿದ್ದರಾಮಯ್ಯ ಏನು ಮಾಡಬೇಕೆಂದು ಪ್ರಶ್ನಿಸಿದ್ದರು. ಸಿದ್ದರಾಮಯ್ಯ ನಾಚಿಕೆ, ಮಾನ-ಮರ್ಯಾದೆ ಇಲ್ಲದ ವ್ಯಕ್ತಿ, ಅವರಿಗೆ ತಲೆ ಕೆಟ್ಟಿರಬೇಕು ಎಂದು ಈಶ್ವರಪ್ಪ ಮನಸೋ ಇಚ್ಛೆ ಮಾತನಾಡಿದರು.