ಸಣ್ಣವನಿದ್ದಾಗಲೇ ಮನೆ ಬಿಟ್ಟ ಕಾರಣಕ್ಕೆ ಮೋದಿಗೆ ಸಂಸ್ಕಾರ ಸಿಕ್ಕಿಲ್ಲ: ಮಲ್ಲಿಕಾರ್ಜುನ ಖರ್ಗೆ
"ಹೃದಯವೇ ಇಲ್ಲದ ಪ್ರಧಾನಿ ಸಿಕ್ಕಿರುವುದು ದೇಶದ ದುರ್ದೈವ"
ಕಲಬುರಗಿ, ಮೇ 6: ಮೋದಿ ಸಣ್ಣವನಿದ್ದಾಗಲೇ ಮನೆ ಬಿಟ್ಟ ಕಾರಣಕ್ಕೆ ಆತನಿಗೆ ಸಂಸ್ಕಾರವೇ ಸಿಕ್ಕಿಲ್ಲ. ಹೀಗಾಗಿ ಅವರಿಗೆ ರಾಜಕೀಯ ಜ್ಞಾನವೇ ಇಲ್ಲ ಎಂದು ಲೇವಡಿ ಮಾಡಿರುವ ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಅಮೇಠಿ ಮತ್ತು ರಾಯಬರೇಲಿಯಲ್ಲಿ ಕಾಂಗ್ರೆಸ್ ಗೆದ್ದರೆ ಮೋದಿ ತಮ್ಮ ಕ್ಷೇತ್ರಕ್ಕೆ ರಾಜೀನಾಮೆ ನೀಡುವರೇ? ಎಂದು ಇಂದಿಲ್ಲಿ ಸವಾಲು ಹಾಕಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೋಲಲಿದ್ದಾರೆ ಎನ್ನುವ ಮೋದಿ ಅವರಿಬ್ಬರೂ ಗೆದ್ದರೆ ಮೋದಿ ತನ್ನ ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ನಮಗೆ ಕೆಲಸದ ಮೇಲೆ ವಿಶ್ವಾಸ: ಯಡಿಯೂರಪ್ಪ ಒಳ್ಳೆಯ ಜ್ಯೋತಿಷಿ ಇರಬಹುದು. ಹೀಗಾಗಿ ಭವಿಷ್ಯ ಹೇಳುತ್ತಿದ್ದಾರೆ. ನಾವು ಅಭಿವೃದ್ಧಿ ಕೆಲಸ ನಂಬಿದವರು, ಜನರ ಅಭಿಪ್ರಾಯದ ಮೇಲೆ ನಮಗೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಖರ್ಗೆ ಸೋಲುತ್ತಾರೆಂದು ಬಿಎಸ್ವೈ ಭವಿಷ್ಯ ಹೇಳಿದ್ದಾರೆ. ಅವರು ಹೀಗೆ ಭವಿಷ್ಯ ಹೇಳಿಕೊಂಡೇ ತಿರುಗಾಡುತ್ತಿರಲಿ ಎಂದು ಲೇವಡಿ ಮಾಡಿದ ಖರ್ಗೆ, ರಾಜೀವ್ ಗಾಂಧಿ ಭ್ರಷ್ಟ ನಂ.1 ಆಗಿ ಸತ್ತರು ಎಂದು ಮೋದಿ ಟೀಕಿಸಿದ್ದಾರೆ. ಆದರೆ, ಅವರು ದೇಶಕ್ಕೆ ಪ್ರಾಣ ಕೊಟ್ಟಿದ್ದಾರೆ. ಮೋದಿಗೆ ಹೃದಯವೇ ಇಲ್ಲ. ಇಂತಹ ಪ್ರಧಾನಿ ಸಿಕ್ಕಿರುವುದು ದೇಶದ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು.
ಚುನಾವಣಾ ಆಯೋಗ ಕಾಂಗ್ರೆಸ್ ಪಕ್ಷಕ್ಕೊಂದು ನ್ಯಾಯ, ಬಿಜೆಪಿಗೆ ಒಂದು ನ್ಯಾಯ ಎಂಬಂತೆ ದ್ವಂದ್ವ ನೀತಿ ಅನುಸರಿಸುತ್ತಿದೆ. ಇದರಿಂದ ಪ್ರಜಾಪ್ರಭುತ್ವಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆ. ಚುನಾವಣಾ ಆಯೋಗವೂ ಸೇರಿ ಪ್ರತಿಯೊಂದು ಸಂಸ್ಥೆಯವರಿಗೆ ಬಿಜೆಪಿಯವರು ಹೆದರಿಸುತ್ತಿದ್ದಾರೆ’
-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ನಾಯಕ