ಮಡಿಕೇರಿ: ಭಯೋತ್ಪಾದನೆ ವಿರುದ್ಧ ಸರ್ವಧರ್ಮೀಯರಿಂದ ಮೌನ ಮೆರವಣಿಗೆ, ಪ್ರಾರ್ಥನೆ
ಮಡಿಕೇರಿ, ಮೇ 6: ರಾಷ್ಟ್ರದ ವಿವಿಧೆಡೆಗಳಲ್ಲಿ ಸಮಾಜದ ಸ್ವಾಸ್ಥ್ಯ ಕದಡುವಂತೆ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯಗಳನ್ನು ಖಂಡಿಸಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸರ್ವಧರ್ಮೀಯರಿಂದ ಮೌನ ಮೆರವಣಿಗೆ ಹಾಗೂ ಸರ್ವಧರ್ಮ ಪ್ರಾರ್ಥನೆ ನಡೆಯಿತು.
ಕಾರ್ಯಕ್ರಮದ ಸಂಚಾಲಕ ಕೆ.ಟಿ. ಬೇಬಿ ಮ್ಯಾಥ್ಯು ಹಾಗೂ ವಿವಿಧ ಸಾಮಾಜಿಕ ಸಂಘಸಂಸ್ಥೆಗಳ ಪ್ರಮುಖರು ಸೋಮವಾರ ಸಂಜೆ ಇಲ್ಲಿನ ಇಂದಿರಾಗಾಂಧಿ ವೃತ್ತದ ಬಳಿಯಿಂದ ಗಾಂಧಿ ಮಂಟಪದವರೆಗೆ ಮೌನ ಮೆರವಣಿಗೆ ನಡೆಸುವ ಮೂಲಕ ಭಯೋತ್ಪಾದನಾ ಕೃತ್ಯಗಳನ್ನು ತೀವ್ರ ಖಂಡಿಸಿದರು.
ಮೌನ ಮೆರವಣಿಗೆಯಲ್ಲಿ ಸರ್ವ ಧರ್ಮಗಳ ಗುರುಗಳು, ಸ್ವಾಮೀಜಿಗಳು ಭಾಗವಹಿಸಿ ಗಾಂಧಿ ಮೈದಾನದಲ್ಲಿ ಲೋಕ ಶಾಂತಿಗಾಗಿ ಸರ್ವಧರ್ಮ ಪ್ರಾರ್ಥನೆ ನೆರವೇರಿಸಿದರು.
ಮೌನ ಮೆರವಣಿಗೆಯಲ್ಲಿ ಕೊಡಗು ಜಿಲ್ಲಾ ಜಮಾಅತ್ಗಳ ಒಕ್ಕೂಟದ ಅಧ್ಯಕ್ಷ ಜಿ.ಎಚ್. ಮುಹಮ್ಮದ್ ಹನೀಫ್, ಅಹಿಂದ ಜಿಲ್ಲಾಧ್ಯಕ್ಷ ಟಿ.ಎಂ. ಮುದ್ದಯ್ಯ, ರೋಮನ್ ಕ್ಯಾಥೋಲಿಕ್ ಸಂಘದ ಪ್ರಧಾನ ಕಾರ್ಯದರ್ಶಿ ಜಾನ್ಸನ್ ಪಿಂಟೋ ಸೇರಿದಂತೆ ಹಲವು ಪ್ರಮುಖರು, ಸಾರ್ವಜನಿಕರು ಪಾಲ್ಗೊಂಡಿದ್ದರು.
Next Story