ಶಿವಮೊಗ್ಗ: ಸೆಲ್ಫಿ ತೆಗೆದುಕೊಳ್ಳುವಾಗ ನೀರಿನ ಗುಂಡಿಗೆ ಬಿದ್ದು ಯುವಕ ಸಾವು
ಶಿವಮೊಗ್ಗ, ಮೇ 8: ಮೊಬೈಲ್ನಲ್ಲಿ ಸೆಲ್ಫಿ ಪೊಟೋ ಕ್ಲಿಕ್ಕಿಸಿಕೊಳ್ಳುವ ವೇಳೆ ಆಯತಪ್ಪಿ ನೀರಿನ ಗುಂಡಿಗೆ ಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಜೋಗ ಸಮೀಪದ ಮಹಾತ್ಮಾ ಗಾಂಧಿ ಜಲ ವಿದ್ಯುದಾಗಾರದ ಸಮೀಪದ ಎಮ್ಮಲಗಗುಂಡಿಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಗಣೇಶ್ ಬಂಡಿಸಿದ್ದಣ್ಣವರ್ (21) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಈತ ಸ್ನೇಹಿತರ ಜೊತೆ ಸೇತುವೆ ಕೆಲಸದ ಕಾಮಗಾರಿಗೆಂದು ಆಗಮಿಸಿದ್ದರು. ಮಂಗಳವಾರ ದಿನದ ಕೆಲಸ ಮುಗಿಸಿ ಸ್ನಾನಕ್ಕೆಂದು ಎಮ್ಮಲಗಗುಂಡಿಯ ಬಳಿ ಸ್ನೇಹಿತರ ಜೊತೆ ಗಣೇಶ್ ಆಗಮಿಸಿದ್ದ. ಸ್ನಾನ ಮುಗಿಸಿ ಹಿಂದಿರುಗುವ ವೇಳೆ ಸೆಲ್ಫಿ ಕ್ಲಿಕ್ಕಿಸಿ ಕೊಳ್ಳಲು ಗಣೇಶ್ ಗುಂಡಿಯ ಬಳಿ ಹೋಗಿದ್ದ. ಆತ ಹಿಂದಿರುಗದಿದ್ದರಿಂದ ಅನುಮಾನಗೊಂಡ ಆತನ ಸ್ನೇಹಿತರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಗುಂಡಿಗೆ ಬಿದ್ದಿರುವುದು ಮಾಹಿತಿ ಗೊತ್ತಾಗಿದೆ.
ಶವ ಪತ್ತೆ ಹಚ್ಚಿ ಹೊರತೆಗೆಯಲಾಗಿದೆ. ಈ ಸಂಬಂಧ ಜೋಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story