ಜಾಧವ್ಗೆ ಕ್ಲೀನ್ಚಿಟ್ ನೀಡಿದ ಸ್ಪೀಕರ್ ಮೇಲೆ ನಿಮಗೆ ನಂಬಿಕೆ ಇಲ್ಲವೇ: ವಿ.ಸೋಮಣ್ಣ ಪ್ರಶ್ನೆ
ಕಲಬುರಗಿ, ಮೇ 11: ರಾಜೀನಾಮೆ ಅಂಗೀಕಾರದ ವೇಳೆ ಸ್ಪೀಕರ್ ಕ್ಲೀನ್ಚೀಟ್ ನೀಡಿದ್ದು, ನಿಮ್ಮ ಗಮನಕ್ಕೆ ಬಂದಿಲ್ಲವೇ' ಎಂದು ಮಾಜಿ ಸಚಿವ ವಿ.ಸೋಮಣ್ಣ ಉಮೇಶ್ ಜಾಧವ್ ಹಣಕ್ಕಾಗಿ ಮಾರಾಟವಾಗಿದ್ದಾರೆ ಎಂಬ ಕಾಂಗ್ರೆಸ್ ಮುಖಂಡರ ಆರೋಪದ ಕುರಿತು ಪ್ರಶ್ನಿಸಿದ್ದಾರೆ.
ಶನಿವಾರ ಚಿಂಚೋಳಿ ಕ್ಷೇತ್ರದ ಹರಕೂಡ ಮಠದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ ಇದು 16ನೆ ಉಪಚುನಾವಣೆ. ಇಲ್ಲಿ ನಡೆಯುತ್ತಿರುವ ಚುನಾವಣೆ ಸ್ವಾಭಿಮಾನದ ಚುನಾವಣೆ. ಇಂತಹ ಚುನಾವಣೆಯನ್ನು ಇದುವರೆಗೂ ಎಲ್ಲಿಯೂ ನೋಡಿಲ್ಲ ಎಂದರು.
ಮೆೃತ್ರಿ ಸರಕಾರಕ್ಕೆ ಭಯ ಹುಟ್ಟಿಕೊಂಡಿದ್ದು, ಕಾಂಗ್ರೆಸಿನ ಎಲ್ಲ ಸಚಿವರೂ ಇಲ್ಲೇ ಬೀಡು ಬಿಟ್ಟಿದ್ದಾರೆ. ರಾಜ್ಯ ಸರಕಾರವೇ ಚಿಂಚೋಳಿಗೆ ಬಂದಿದ್ದು, ಅವರಿಗೆ ಸೋಲಿನ ಭೀತಿ ಉಂಟಾಗಿರುವುದರಿಂದ ಈ ರೀತಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಜಾಧವ್ ರಾಜೀನಾಮೆ ಅಂಗೀಕಾರದ ಸಮಯದಲ್ಲಿ ಅವರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗಿಲ್ಲ ಎನ್ನುವುದನ್ನೂ ಸ್ಪೀಕರ್ ಸ್ಪಷ್ಟಪಡಿಸಿದ್ದಾರೆ. ಅವರ ಪಕ್ಷದ ಸ್ಪೀಕರ್ ಅವರೇ ಜಾಧವ್ಗೆ ಕ್ಲೀನ್ಚಿಟ್ ನೀಡಿರುವಾಗ, ಈ ನಾಯಕರ ಹೇಳಿಕೆಗೆ ಎಲ್ಲಿದೆ ನೈತಿಕತೆ ಎಂದು ಸೋಮಣ್ಣ ಪ್ರಶ್ನಿಸಿದರು.
ಆಸೆ ಆಮಿಷಗಳಿಗೆ ಒಳಗಾಗಿ ರಾಜೀನಾಮೆ ನೀಡಿದ್ದಾರೆ ಎನ್ನುವ ನಾಯಕರ ಹೇಳಿಕೆಗೆ ಸಭಾಪತಿಗಳಾದ ರಮೇಶ್ ಕುಮಾರ್ ಅವರೇ ಉತ್ತರ ನೀಡಿದ್ದಾರೆ ಎಂದರು.
ಉಮೇಶ್ ಜಾಧವ್ ಮಾತನಾಡಿ, ಕಾಂಗ್ರೆಸ್ ಪಕ್ಷದವರಿಗೆ ಸೋಲಿನ ಭಯ ಆರಂಭವಾಗಿದೆ. ಹೀಗಾಗಿ ನನ್ನ ವಿರುದ್ದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದನ್ನು ಮರೆತಿದ್ದಾರೆ. ನಮ್ಮ ಕುಟುಂಬಸ್ಥರಿಗೆ ಟಿಕೆಟ್ ಕೊಟ್ಟಿದ್ದೀವಿ ಎಂದು ಬಡಾಯಿ ಕೊಚ್ಚಿಕೊಳ್ಳುವ ಕೈ ನಾಯಕರು, ಅವರನ್ನು ಸೋಲಿಸಿದ್ದು ಯಾರು ಎನ್ನುವುದಕ್ಕೂ ಉತ್ತರ ನೀಡಲಿ ಎಂದು ಸವಾಲು ಹಾಕಿದರು.