ರೈಲ್ವೆ ಪೊಲೀಸರ ಕಿರುಕುಳ ಆರೋಪ: ಲೈವ್ ವೀಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕ
ದಾವಣಗೆರೆ, ಮೇ 11: ರೈಲ್ವೆ ಪೊಲೀಸರ ಕಿರುಕುಳ ತಾಳಲಾರದೆ ಯುವಕನೊಬ್ಬ ಡೆತ್ ನೋಟ್ ಬರೆದು ಲೈವ್ ವೀಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆ ಜಿಲ್ಲೆಯ ನಿಟ್ಟುವಳ್ಳಿಯ ಮಣಿಕಂಠ ಸರ್ಕಲ್ ಬಳಿ ನಡೆದಿದೆ.
ಸಂಜಯ್ (28) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಕಳೆದ ತಿಂಗಳು ಸಂಜಯ್ ಸಹೋದರ ಸಾಗರ್ ಎಂಬವರ ಮೃತದೇಹ ರೈಲ್ವೆ ಹಳಿಯ ಬಳಿ ಅನುಮಾನಾಸ್ಪದವಾಗಿ ಸಿಕ್ಕಿತ್ತು. ಸಾಗರ್ ನನ್ನು ಕೊಲೆ ಮಾಡಿ ಬಿಸಾಕಿದ್ದಾರೆ ಎಂದು ಮನೆಯವರು ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ರೈಲ್ವೆ ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ವಿಚಾರಣೆ ನೆಪದಲ್ಲಿ ಸಂಜಯ್ ಹಾಗೂ ಆತನ ತಾಯಿ ತಮ್ಮಂದಿರಿಗೆ ರೈಲ್ವೆ ಪೊಲೀಸರು ಕಿರುಕುಳ ನೀಡಿದ್ದಲ್ಲದೇ, ಅವಾಚ್ಯ ಶಬ್ಧಗಳಿಂದ ಪಿಎಸ್ಐ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದರಿಂದ ಮನನೊಂದ ಸಂಜಯ್ ಡೆತ್ ನೋಟ್ ಬರೆದು, ಫಿನಾಯಿಲ್ ಕುಡಿಯುವ ವೀಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಆತ್ಮಹತ್ಯೆಗೆ ಯತ್ನಿಸಿದ ಸಂಜಯ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನನ್ನ ಮಗನ ಕೊಲೆ ಕೇಸ್ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿಲ್ಲ. ತನಿಖೆ ಬಗ್ಗೆ ಕೇಳಿದರೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ ಹಾಗೂ ಹೆದರಿಸುತ್ತಿದ್ದಾರೆ. ನಮಗೆ ರಕ್ಷಣೆ ಹಾಗೂ ನ್ಯಾಯ ಕೊಡಿಸಿ ಎಂದು ಕುಟುಂಬಸ್ಥರು ಅಂಗಲಾಚಿಕೊಳ್ಳುತ್ತಿದ್ದಾರೆ.