ಬೆಳಗಾವಿ: 188 ಸಾಧಕ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಸನ್ಮಾನ
ಬೆಳಗಾವಿ, ಮೇ 13: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಹಾಗೂ ಮೈಸೂರು ಮಿನರಲ್ಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಜನದಿನದ ಪ್ರಯುಕ್ತ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕನ್ನಡ, ಇಂಗ್ಲಿಷ್, ಮರಾಠಿ ಹಾಗೂ ಉರ್ದು ಮಾಧ್ಯಮದ ಪ್ರತಿಭಾವಂತ 188 ಸಾಧಕ ವಿದ್ಯಾರ್ಥಿಗಳಿಗೆ ರವಿವಾರ ರಾತ್ರಿ ಸನ್ಮಾನಿಸಲಾಯಿತು.
ನಗರದ ಬೆಳಗಾವಿ ಕ್ಲಬ್ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ಎಂಟು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಮತ್ತು ಐಪ್ಯಾಡ್ ಹಾಗೂ ಇತರ 180 ವಿದ್ಯಾರ್ಥಿಗಳಿಗೆ ಚಿನ್ನ ಹಾಗೂ ಬೆಳ್ಳಿ ಪದಕಗಳ ಜೊತೆಗೆ ಸ್ಮರಣಿಕೆಗಳನ್ನು ನೀಡಲಾಯಿತು.
ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿ, ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮಿ, ಮುತ್ನಾಳ ಕೇದಾರ ಪೀಠದ ಸ್ವಾಮಿ, ಬಡೆಕೊಳ್ಳಮಠದ ನಾಗೇಂದ್ರ ಸ್ವಾಮಿ ಕಾರ್ಯಕ್ರಮದ ಸಾನಿಧ್ಯ ವಹಿಸಿ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇಂತಹ ಅಪರೂಪದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಕ್ಷೇತ್ರದ ಸಮಗ್ರ ಅಭಿವೃದ್ಧಿ ಪಡಿಸುವುದಲ್ಲದೆ, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೆ ಮಾಡುತ್ತೇನೆ. ಗ್ರಾಮೀಣ ಕ್ಷೇತ್ರ ಶಿಕ್ಷಣದಲ್ಲಿ ಅತ್ಯಂತ ಹಿಂದುಳಿದಿದೆ. ಇಲ್ಲಿಯ ಶಾಲೆಗಳು ಅಭಿವೃದ್ಧಿ ಕಂಡಿರಲಿಲ್ಲ. ನಾನು ಆಯ್ಕೆಯಾದ ನಂತರ ಹಲವಾರು ಶಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
ಈ ಭಾಗದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಏನಾಗಬೇಕೋ ಎಲ್ಲವನ್ನೂ ಹಂತಹಂತವಾಗಿ ಮಾಡಲಾಗುವುದು. ಗ್ರಾಮೀಣ ಕ್ಷೇತ್ರದ ಜನರು ನನಗೆ ಸ್ವಾಭಿಮಾನದ ಮರುಹುಟ್ಟು ನೀಡಿದ್ದಾರೆ. ಅವರ ಸಂಪೂರ್ಣ ಋಣ ನನ್ನ ಮೇಲಿದೆ. ಜೀವನ ಪರ್ಯಂತ ಅವರ ಸೇವೆ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಸಿ.ಸಿ.ಪಾಟೀಲ್, ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳ್ಕರ್, ಬಸವರಾಜ ಮ್ಯಾಗೋಟಿ, ಯುವರಾಜ ಕದಂ ಸೇರಿದಂತೆ ನೂರಾರು ಜನಪ್ರತಿನಿಧಿಗಳು, ಸಾವಿರಾರು ನಾಗರಿಕರು ಉಪಸ್ಥಿತರಿದ್ದರು.