ಸಕಲೇಶಪುರ: ಅಪರಿಚಿತ ಯುವತಿಯ ಶವ ರಾಜ್ಯ ಹೆದ್ದಾರಿಯಲ್ಲಿ ಪತ್ತೆ; ಅತ್ಯಾಚಾರವೆಸಗಿ ಕೊಲೆ ಶಂಕೆ
ಸಕಲೇಶಪುರ, ಮೇ 13: ಯುವತಿಯೋರ್ವಳ ಕತ್ತು ಸೀಳಿ ಕೊಲೆ ಮಾಡಿ ರಾಜ್ಯ ಹೆದ್ದಾರಿ ಬದಿಯಲ್ಲಿ ಶವವನ್ನು ಬಿಸಾಡಿರುವ ಘಟನೆ ತಾಲೂಕಿನ ಕ್ಯಾನಹಳ್ಳಿ ಸಮೀಪ ನಡೆದಿದೆ.
ತಾಲೂಕಿನ ಸಕಲೇಶಪುರ-ಕೊಡ್ಲಿಪೇಟೆ ರಾಜ್ಯ ಹೆದ್ದಾರಿ ಕ್ಯಾನಹಳ್ಳಿ ಸಮೀಪ ಹೆದ್ದಾರಿಗೆ ಹೊಂದಿಕೊಂಡಿರುವ ಗಣೇಶ್ ಎಂಬುವರ ಕಾಫಿ ತೋಟದ ಬಳಿ ಅಪರಿಚಿತ ಯುವತಿಯ ಶವ ರವಿವಾರ ಮುಂಜಾನೆ ಪತ್ತೆಯಾಗಿದೆ. ಯುವತಿಗೆ ಸುಮಾರು 25 ವರ್ಷ ಆಗಿರಬಹುದೆಂದು ಅಂದಾಜಿಸಲಾಗಿದ್ದು ಈಕೆ ಚೂಡಿದಾರ ಧರಿಸಿದ್ದು, ಬಲ ಮುಂಗೈ ಮೇಲೆ ಜೀಸಸ್ ರಾಜು ಎಂಬ ಹಚ್ಚೆ ಇದೆ. ಕುತ್ತಿಗೆಯಲ್ಲಿ ಯಾವುದೋ ವಸ್ತುವಿನಿಂದ ಬಿಗಿದಿರುವ ಮಾರ್ಕ್ ಇದ್ದು, ಮೈ-ಕೈನಲ್ಲಿ ತರಚಿದ ಗಾಯವಿದೆ. ಅಪರಿಚಿತರು ಈಕೆಯ ಮೇಲೆ ಅತ್ಯಾಚಾರವೆಸಗಿ ನಂತರ ಕೊಲೆ ಮಾಡಿ ಇಲ್ಲಿ ಬಿಸಾಡಿರುವ ಸಾಧ್ಯತೆಗಳಿದೆ ಎನ್ನಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚೇತನ್ ರಾಥೋಡ್, ಡಿ.ವೈ.ಎಸ್.ಪಿ ಶಶಿಧರ್, ಆರಕ್ಷಕ ವೃತ್ತ ನಿರೀಕ್ಷಕ ವಸಂತ್ ಸೇರಿದಂತೆ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೊರ ಊರಿನವರು ಯುವತಿಯ ಮೇಲೆ ಅತ್ಯಾಚಾರವೆಸಗಿ ಶವವನ್ನು ಇಲ್ಲಿ ಬಿಸಾಡಿರುವ ಸಾಧ್ಯತೆಗಳಿದೆ. ಶವ ಪರೀಕ್ಷೆ ನಂತರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಪರಿಶೀಲನೆ ಮಾಡಲಾಗುವುದು
-ಚೇತನ್ ರಾಥೋಡ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ