ದಲಿತ ಸಿಎಂ ಹೆಸರಲ್ಲಿ ಅಪಮಾನ ಮಾಡಬೇಡಿ: ಮಲ್ಲಿಕಾರ್ಜುನ ಖರ್ಗೆ
ಹುಬ್ಬಳ್ಳಿ, ಮೇ 15: ಪದೇ ಪದೇ ದಲಿತ ಮುಖ್ಯಮಂತ್ರಿ ಹೆಸರು ಪ್ರಸ್ತಾಪ ಮಾಡಿ ತಮಗೆ ಅಪಮಾನ ಮಾಡಬೇಡಿ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಬುಧವಾರ ಹುಬ್ಬಳ್ಳಿ ಖಾಸಗಿ ಹೊಟೇಲ್ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಇಂತಹ ಹೇಳಿಕೆ ಬರುತ್ತವೆ. ನಂತರ ಈ ಬಗ್ಗೆ ಎಲ್ಲಿಯೂ ಚರ್ಚೆಗಳು ನಡೆಯುವುದಿಲ್ಲ. ಹೀಗಾಗಿ ದಲಿತ ಮುಖ್ಯಮಂತ್ರಿ ಹೆಸರು ಪ್ರಸ್ತಾಪ ಮಾಡಬೇಡಿ ಎಂದು ತಿಳಿಸಿದರು.
ಉಮೇಶ್ ಜಾಧವ್ ಅವರನ್ನು ರಾಜಕೀಯಕ್ಕೆ ಕರೆತಂದಿದ್ದು ನಾನು ಹಾಗೂ ಧರ್ಮಸಿಂಗ್. ತಮ್ಮನ್ನು ಸೋಲಿಸಲು ಮೋದಿ ಜೊತೆ ಸೇರಿ ಬಿಜೆಪಿಯ ಕೆಲವು ನಾಯಕರು ಕುತಂತ್ರ ಮಾಡಿದ್ದಾರೆ. ಆದರೆ ಎಂದಿಗೂ ಅದು ಫಲಿಸುವುದಿಲ್ಲ. ಸಂಸತ್ತಿನಲ್ಲಿ ಬೇರೆಯವರ ರೀತಿ ನಾನು ನಿದ್ರೆ ಮಾಡಿಲ್ಲ ಎಂದು ಅವರು ತಿರುಗೇಟು ನೀಡಿದರು.
ಕುಂದಗೋಳ, ಚಿಂಚೋಳಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಪ್ರತಿಪಕ್ಷ ನಾಯಕನಾಗಿ ಉತ್ತಮ ಕೆಲಸ ಮಾಡಿದ್ದೇನೆ. ನನ್ನ ಕೆಲಸ ನೋಡಿ ಜನರು ತೀರ್ಮಾನ ಮಾಡುತ್ತಾರೆ ಎಂದು ಅವರು ಹೇಳಿದರು.