ಮಡಿಕೇರಿ: ಗ್ರಾಮಕ್ಕೆ ಬಂದ ಕಾಡಾನೆಗಳನ್ನು ಕಾಡಿಗಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿಗಳು
ಮಡಿಕೇರಿ,ಮೇ 15 : ಕಾಡಿನಿಂದ ನಾಡಿಗೆ ಬಂದ ಕಾಡಾನೆ ಹಿಂಡುಗಳನ್ನು ಮತ್ತೆ ಕಾಡಿಗಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಕಳೆದ ಎರಡು ದಿನಗಳ ಹಿಂದೆ ದುಬಾರೆ ಮೀಸಲು ಅರಣ್ಯದಿಂದ ಕಾವೇರಿ ನದಿಯನ್ನು ದಾಟಿ ಅಭ್ಯತ್ ಮಂಗಲ ವಾಲ್ನೂರು ತ್ಯಾಗತ್ತೂರು ಒಂಟಿ ಅಂಗಡಿ ನೆಲ್ಲಿಹುದಿಕೇರಿ ಗ್ರಾಮದ ಸಮೀಪದಲ್ಲಿರುವ ಕಾಫಿ ತೋಟಗಳಲ್ಲಿ ಕಾಣಿಸಿಕೊಂಡಿತು .ಕಾಡಾನೆಯನ್ನು ಕಂಡ ಕಾರ್ಮಿಕರು, ಸಾರ್ವಜನಿಕರು ಭಯಭೀತರಾಗಿದ್ದರು. ಹಗಲಿನಲ್ಲೂ ರಾಜಾರೋಷವಾಗಿ ರಸ್ತೆಗಳಲ್ಲೇ ನಡೆದಾಡಿದ ಪರಿಣಾಮ ವಾಹನ ಸವಾರರು ಆತಂಕಕ್ಕೊಳಗಾಗಿದ್ದರು.
ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಫಿ ತೋಟ ಹಾಗೂ ಗ್ರಾಮದ ಆಸುಪಾಸಿನಲ್ಲಿ ಕಂಡು ಬಂದ 13ಕ್ಕೂ ಹೆಚ್ಚು ಕಾಡಾನೆ ಹಿಂಡುಗಳನ್ನು ದಿನವಿಡೀ ಕಾರ್ಯಾಚರಣೆ ನಡೆಸಿ ಮತ್ತೆ ದುಬಾರೆ ಮೀಸಲು ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಆರ್.ಎಫ್.ಓ ಅರುಣ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿಲಾಸ್ ಗೌಡ, ಅರಣ್ಯ ರಕ್ಷಕ ಚರಣ್, ಸಿಬ್ಬಂದಿಗಳಾದ ಧರ್ಮಪಾಲ್, ಜಗದೀಶ್, ಆಲ್ಬರ್ಟ್, ವಾಸುದೇವ, ಆರ್.ಆರ್.ಟಿ. ತಂಡದ ಆಶಿಕ್, ಸುಬ್ರಮಣ್ಯ ಸೇರಿದಂತೆ ಇನ್ನಿತರರು ಇದ್ದರು.