ಮುಖ್ಯಮಂತ್ರಿ ಕುರ್ಚಿ ಅಂಗಡಿಯಲ್ಲಿ ಸಿಗಲ್ಲ: ಡಿ.ಕೆ.ಶಿವಕುಮಾರ್
ಹುಬ್ಬಳ್ಳಿ, ಮೇ 16: ಮುಖ್ಯಮಂತ್ರಿ ಕುರ್ಚಿ ಯಾವುದೇ ಅಂಗಡಿಯಲ್ಲಿ ಖರೀದಿಗೆ ಸಿಗುವುದಿಲ್ಲ. ಮುಂದಿನ ನಾಲ್ಕು ವರ್ಷಗಳ ಕಾಲ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದಗೋಳ ಉಪಚುನಾವಣೆಗೆ ಇನ್ನೂ ಮೂರು ದಿನ ಮಾತ್ರ ಬಾಕಿ ಇದ್ದು, ಕ್ಷೇತ್ರದಲ್ಲಿ ಪಕ್ಷದ ಪ್ರತ್ಯೇಕ ಕಚೇರಿ ತೆರೆಯಲಿದ್ದು, ಅದರ ಸಂಪೂರ್ಣ ಜವಾಬ್ದಾರಿಯನ್ನು ನಾನೇ ವಹಿಸಿಕೊಂಡು, ಕ್ಷೇತ್ರವನ್ನು ದತ್ತು ಪಡೆದುಕೊಂಡು ಅಭಿವೃದ್ಧಿಪಡಿಸುತ್ತೇನೆ ಎಂದರು.
ಮತದಾರರು ತಮ್ಮ ಮತಗಳನ್ನು ಬಿಜೆಪಿಗೆ ಹಾಕಿ ವ್ಯರ್ಥ ಮಾಡದೇ, ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡುವಂತೆ ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಜನರಿಗೆ ಅವರು ಕರೆ ನೀಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಶೋಭಾ ಕರಂದ್ಲಾಜೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ನಮ್ಮ ಅಕ್ಕ ಶೋಭಾ ಕರಂದ್ಲಾಜೆ ಬಳೆಗಳನ್ನು ಕಳುಹಿಸಿಕೊಡಲಿ, ನಾವು ಹೋಗಿ ಅದನ್ನು ಹಾಕಿಕೊಳ್ಳುತ್ತೇವೆ ಎಂದರು.
ಬಿಜೆಪಿಯವರು ಕೀಳುಮಟ್ಟದ ರಾಜಕೀಯ ಮಾಡುವುದನ್ನು ಬಿಡಲಿ. ಅಭಿವೃದ್ಧಿ ವಿಚಾರವನ್ನು ಬಿಟ್ಟು ಬೇರೆ ವಿಷಯಗಳನ್ನು ಮಾತ್ರ ಕೆದಕಿದರೆ, ಜನ ಕ್ಷಮಿಸುವುದಿಲ್ಲ ಎಂದು ಶಿವಕುಮಾರ್ ಹೇಳಿದರು.