ಸಿ.ಎಸ್.ಶಿವಳ್ಳಿಗೆ ಬಿಜೆಪಿ 25 ಕೋಟಿ ರೂ.ಆಮಿಷ ಒಡ್ಡಿತ್ತು: ಸಿದ್ದರಾಮಯ್ಯ ಆರೋಪ
ಹುಬ್ಬಳ್ಳಿ, ಮೇ 16: ದಿವಂಗತ ಸಿ.ಎಸ್.ಶಿವಳ್ಳಿಗೆ ಬಿಜೆಪಿಯವರು 25 ಕೋಟಿ ರೂ.ಗಳ ಆಮಿಷವನ್ನು ಒಡ್ಡಿದ್ದನ್ನು, ಸ್ವತಃ ಅವರೇ ನನಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಗುರುವಾರ ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಪರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಶಿವಳ್ಳಿ ಈ ವಿಷಯ ನನಗೆ ತಿಳಿಸಿದಾಗ, ಹಣವನ್ನು ಅವರ ಮುಖಕ್ಕೆ ಬಿಸಾಕಿ ಹೊರಗೆ ಕಳುಹಿಸು ಎಂದು ಹೇಳಿದ್ದೆ ಎಂದರು.
ಆಪರೇಷನ್ ಕಮಲಕ್ಕೆ ಬಲಿಯಾಗಿ ಉಮೇಶ್ ಜಾಧವ್ ಬಿಜೆಪಿಗೆ ಮಾರಾಟವಾಗಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾದರೆ ಚುನಾಯಿತವಾದ ಪಕ್ಷಕ್ಕೆ ನಿಷ್ಠಾವಂತರಾಗಿಬೇಕು. ಸಂಸದ ಪ್ರಹ್ಲಾದ್ ಜೋಶಿ ಹಾಗೂ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರು ಕೊಡುಗೆ ಕುಂದಗೋಳ ಕ್ಷೇತ್ರಕ್ಕೆ ಏನು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು, ನಮ್ಮನ್ನ ನೋಡಬೇಡಿ ಮೋದಿಯನ್ನು ನೋಡಿ ಮತ ಹಾಕಿ ಎನ್ನುತ್ತಿದ್ದಾರೆ. ನಮ್ಮಲ್ಲಿ ಹೆಣ್ಣು ನೋಡಲು ಹೋದರೆ, ಹೆಣ್ಣಿನ ಬದಲು, ಆಕೆಯ ತಾಯಿಯನ್ನು ನೋಡಿ ಬೀಗತನ ಮಾಡುವಂತಿದೆ ಇವರ ಪರಿಸ್ಥಿತಿ ಎಂದು ಅವರು ವ್ಯಂಗ್ಯವಾಡಿದರು.