ಅಪರೂಪದ ಛಾಯಾಚಿತ್ರ ಪ್ರದರ್ಶನಕ್ಕೆ ಮಡಿಕೇರಿ ಕೋಟೆಯಲ್ಲಿ ಚಾಲನೆ
ಮಡಿಕೇರಿ ಮೇ 18 : ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯ ಪ್ರಯುಕ್ತ ಸರ್ಕಾರಿ ವಸ್ತುಸಂಗ್ರಹಾಲಯ ವತಿಯಿಂದ ಶನಿವಾರ ನಗರದ ಕೋಟೆ ಆವರಣದಲ್ಲಿ ಏರ್ಪಡಿಸಿದ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಉದ್ಘಾಟಿಸಿದರು.
ಕ್ರಿ.ಶ 1730 ರಿಂದ ಕ್ರಿ.ಶ 1907 ಕಾಲಕ್ಕೆ ಸೇರಿದ ಕೊಡಗು ಜಿಲ್ಲೆಯ ವಿವಿಧ ಐತಿಹಾಸಿಕ ಸ್ಥಳಗಳು ಮತ್ತು ಕಟ್ಟಡಗಳ ಛಾಯಚಿತ್ರಗಳ ಪ್ರದರ್ಶನವು ಎರಡು ದಿನಗಳ ಕಾಲ ನಡೆಯಲಿದ್ದು, ಸಾರ್ವಜನಿಕರು, ಪ್ರವಾಸಿಗರು ವೀಕ್ಷಣೆ ಮಾಡಬೇಕೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಇತಿಹಾಸಿಕ ಪರಂಪರೆ ಬಿಂಬಿಸುವ ಅನೇಕ ಸ್ಥಳಗಳಿದ್ದು, ಅವುಗಳ ಬಗ್ಗೆ ಮಾಹಿತಿಗಳು ಈ ಛಾಯಾಚಿತ್ರ ಪ್ರದರ್ಶನದಲ್ಲಿ ದೊರೆಯಲಿದೆ. ಎಂದು ಅವರು ತಿಳಿಸಿದರು.
ಸರ್ಕಾರಿ ವಸ್ತು ಸಂಗ್ರಹಾಲಯದ ಅಧಿಕಾರಿ ಬಿ.ಪಿ.ರೇಖಾ ಅವರು ಮಾತನಾಡಿ ಸುಮಾರು 28 ಸಾಂಸ್ಕೃತಿಕ ಹಾಗೂ ಪಾರಂಪರಿಕ ಛಾಯಾಚಿತ್ರಗಳನ್ನು ಇಡಲಾಗಿದ್ದು, ಪ್ರವಾಸಿಗರು, ಮೇ 19 ರ ವರೆಗೆ ಚಾಯಾಚಿತ್ರ ಪ್ರದರ್ಶನ ವೀಕ್ಷಣೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.
ಇನ್ನಷ್ಟು ಮಾಹಿತಿ: ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿ ಪಡೆದಿರುವ ಕೊಡಗು ಜಿಲ್ಲೆಯು ತನ್ನ ವಿಶಿಷ್ಟವಾದ ಪ್ರಕೃತಿ ಸೌಂದರ್ಯ, ವಾಯುಗುಣ, ವಾಸ್ತುಶಿಲ್ಪ, ಶಿಲ್ಪಕಲೆ, ಸಾಂಸ್ಕೃತಿಕ ಆಚರಣೆಗಳು ಮುಂತಾದ ಅಂಶಗಳಿಂದ ಪ್ರಸಿದ್ಧಿಯನ್ನು ಪಡೆದಿದೆ. ಜಿಲ್ಲೆಯಲ್ಲಿ ನಡೆದಿರುವ ಪುರಾತತ್ವ ಶೋಧನೆಗಳು, ವಿರಾಜಪೇಟೆಯ ಐಮಂಗಲ, ತಿತಿಮತಿ, ತೂಚಮಕೇರಿ, ಸೋಮವಾರಪೇಟೆ ತಾಲ್ಲೂಕಿನ ಅಂದಗೋವೆ, ದೊಡ್ಡಮಳ್ತೆ, ಬೆಟ್ಟೂರು, ಮುಳ್ಳೂರು, ರಾಮಸ್ವಾಮಿ ಕಣಿವೆ, ಹೆಗ್ಗಡೆಹಳ್ಳಿ, ಮುಂತಾದ ಸ್ಥಳಗಳಲ್ಲಿ ಬೃಹತ್ ಶಿಲಾಯುಗದ ಅವಶೇಷಗಳು, ನೆಲೆಗಳು, ದೊರೆತಿವೆ. ಇತಿಹಾಸದ ಅನೇಕ ಕಾಲಘಟ್ಟದ ಶಾಸನಗಳು, ದಾಖಲಾತಿಗಳು, ಕಡತಗಳು ಹೇರಳವಾಗಿ ದೊರೆತಿವೆ.
ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮಸ್ಥಾನವಾದ ತಲಕಾವೇರಿಯು ಮಡಿಕೇರಿ ತಾಲ್ಲೂಕಿನಲ್ಲಿದೆ. ಕೊಡಗಿನ ಇತಿಹಾಸದ ಆರಂಭದ ಕಾಲದಲ್ಲಿ ತಲಕಾಡು, ಗಂಗರು ಈ ಪ್ರದೇಶವನ್ನು ಆಳಿದರು. ಇವರ ಕಾಲದಲ್ಲಿ ನಿರ್ಮಾಣವಾದ ಮುಳ್ಳೂರಿನ ಬಸದಿಗಳು ಮತ್ತು ತೀರ್ಥಂಕರ ವಿಗ್ರಹಗಳು ಅತ್ಯಂತ ಸೊಗಸಾಗಿವೆ. ಈ ಪ್ರದೇಶವು ಅನಂತರ ಬೇರೆ ಬೇರೆ ರಾಜ ಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು. ಹಾಲೇರಿ ಅರಸರ ಆಳ್ವಿಕೆಯಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆಯಿತು.
ಛಾಯಾಚಿತ್ರ ಪ್ರದರ್ಶನದಲ್ಲಿ ಕ್ರಿ.ಪೂ 1000-600 ವರ್ಷಗಳ ಇತಿಹಾಸವುಳ್ಳ ಸೋಮವಾರಪೇಟೆಯ ಹೆಗ್ಗಡೆಹಳ್ಳಿಯಲ್ಲಿ ಉತ್ಖನವಾದ ನೆಲೆಯ ಐತಿಹಾಸಿಕ ಚಿತ್ರ, ಕ್ರಿ.ಪೂ 3 ಸಾವಿರ ವರ್ಷಗಳ ಸೋಮವಾರಪೇಟೆಯಲ್ಲಿ ಉತ್ಖನನವಾದ ದೊಡ್ಡಮಳ್ತೆ ಹಳೆಯ ಚಿತ್ರ, ಕ್ರಿ.ಶ.1792ರ ನಾಲ್ಕುನಾಡು ಅರಮನೆಯ ಚಿತ್ರ, ಕ್ರಿ.ಶ 10-11 ನೇ ಶತಮಾನದ ಜೈನ ದೇವಾಲಯಗಳ ಚಿತ್ರಗಳು ಸೇರಿದಂತೆ ಐತಿಹಾಸಿಕ ಛಾಯಾಚಿತ್ರ ವೀಕ್ಷಣೆ ಮಾಡಬಹುದಾಗಿದೆ.