ಸಾರಿಗೆ ಬಸ್ ಹರಿದು 15 ಕುರಿಗಳ ಸಾವು
ಮಂಡ್ಯ, ಮೇ 21: ಸಾರಿಗೆ ಬಸ್ ಹರಿದು 15 ಕುರಿಗಳು ಸಾವನ್ನಪ್ಪಿ, 8 ಕುರಿಗಳು ಗಾಯಗೊಂಡಿರುವ ಘಟನೆ ಮದ್ದೂರು-ಮಳವಳ್ಳಿ ಹೆದ್ದಾರಿಯ ಮಣಿಗೆರೆ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಮಣಿಗೆರೆ ಗ್ರಾಮದ ಕಬ್ಬಾಳಯ್ಯ ಅವರ ಪುತ್ರ ಕೆ.ಆನಂದ, ಕೆಂಪೇಗೌಡ ಅವರ ಪುತ್ರ ಲಕ್ಷ್ಮಣ ಹಾಗೂ ಚಿಕ್ಕಣ್ಣ ಅವರ ಪುತ್ರ ಎಂ.ಸಿ. ಕೃಷ್ಣ ಅವರಿಗೆ ಸೇರಿದ ಕುರಿಗಳು ಅಪಘಾತದಲ್ಲಿ ಸಾವನ್ನಪ್ಪಿವೆ.
ಕುರಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ರಸ್ತೆ ದಾಟುತ್ತಿದ್ದಾಗ ಮಳವಳ್ಳಿ ಕಡೆಯಿಂದ ಮದ್ದೂರು ಕಡೆಗೆ ಹೋಗುತ್ತಿದ್ದ ಸಾರಿಗೆ ಬಸ್ ಹರಿದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಕೆ.ಎಂ.ದೊಡ್ಡಿ ಪಶುವ್ಯದ್ಯಾಧಿಕಾರಿ ಸ್ಥಳಕ್ಕೆ ಭೇಟಿನೀಡಿ ಗಾಯಗೊಂಡಿರುವ ಕುರಿಗಳಿಗೆ ಚಿಕಿತ್ಸೆ ನೀಡಿದರು. ಸಾವನ್ನಪ್ಪಿರುವ ಕುರಿಗಳನ್ನು ಮಹಜರು ನಡೆಸಿದರು. ಕೆ.ಎಂ.ದೊಡ್ಡಿ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪರಿಹಾರಕ್ಕೆ ಒತ್ತಾಯ: ಸಾವನ್ನಪ್ಪಿರುವ ಕುರಿಗಳ ಒಡೆಯ ಬಡತನದಲ್ಲಿದ್ದು, ಕುರಿಗಳ ಸಾವಿನಿಂದ ಸಂಕಷ್ಟಕ್ಕೆ ಸಿಲುಕಿವೆ. ಸರಕಾರ ಮತ್ತು ಸಂಬಂಧಿಸಿದ ಇಲಾಖೆ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ.