ಕಾಫಿನಾಡಿನಲ್ಲಿ ಮಳೆಯ ಸಿಂಚನ: ರೈತರ ಮೊಗದಲ್ಲಿ ಮಂದಹಾಸ
ಚಿಕ್ಕಮಗಳೂರು, ಮೇ 21: ಮಳೆ ಇಲ್ಲದೇ ಕಂಗಾಲಾಗಿದ್ದ ಕಾಫಿನಾಡಿನ ರೈತರು, ಬೆಳೆಗಾರರು ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಕೊಂಚ ನಿರಾಳರಾಗಿದ್ದಾರೆ. ಸೋಮವಾರ ಸಂಜೆ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದ್ದರೆ, ಮಂಗಳವಾರ ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು, ರೈತರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ.
ಕಳೆದ ಎರಡು ತಿಂಗಳುಗಳ ಹಿಂದೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯ ರೈತರು ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿದ್ದರು. ಆದರೆ ಸತತ ಒಂದು ವಾರಗಳ ಕಾಲ ಸಂಜೆ ವೇಳೆ ಧಾರಾಕಾರವಾಗಿ ಸುರಿದ ಮಳೆ ಮತ್ತೆ ನಾಪತ್ತೆಯಾಗಿತ್ತು. ಕೃಷಿ ಜಮೀನುಗಳಿಗೆ ಈ ಸತತ ಮಳೆ ಕೊಂಚ ತಂಪು ನೀಡಿತ್ತು. ಹೂ ಮಳೆ ಎಂದೇ ಕಾಫಿ ನಾಡಿನಲ್ಲಿ ಹೆಸರಾಗಿರುವ ಈ ಅವಧಿಯ ಮಳೆ ಮತ್ತೆ ಕಳೆದೊಂದು ತಿಂಗಳು ಬಾರದ ಹಿನ್ನೆಲೆಯಲ್ಲಿ ಈಗಾಗಳೇ ಬೆಲೆ ಕುಸಿತ, ಅತೀವೃಷ್ಟಿಯಿಂದ ಕಂಗಾಲಾಗಿದ್ದ ಕಾಫಿ ಬೆಳೆಗಾರರು ಮಳೆಗಾಗಿ ಪ್ರತಿದಿನ ಆಕಾಶ ನೋಡುವಂತಾಗಿತ್ತು.
ಇನ್ನು ಜಿಲ್ಲೆಯಲ್ಲಿನ ಅಡಿಕೆ ಬೆಳೆಗಾರರದ್ದೂ ಇದೇ ಸಂದಿಗ್ಧ ಪರಿಸ್ಥಿತಿಯಾಗಿತ್ತು. ಈ ಬಾರಿ ಜಿಲ್ಲೆಯಲ್ಲಿ ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಅತೀ ಉಷ್ಣಾಂಶ ಇದ್ದ ಪರಿಣಾಮ ಕಾಫಿ, ಅಡಿಕೆ ತೋಟಗಳನ್ನು ಉಳಿಸಿಕೊಳ್ಳುವುದು ಬೆಳೆಗಾರರ ಪಾಲಿಗೆ ಸಾಹಸವಾಗಿತ್ತು.
ಆದರೆ ಬೆಳೆಗಾರರು, ರೈತರ ನಿರೀಕ್ಷೆಯಂತೆ ಕೊಂಚ ತಡವಾದರೂ ಜಿಲ್ಲೆಯಾದ್ಯಂತ ಸೋಮವಾರ ಧಾರಾಕಾರವಾಗಿ ಸುರಿಯುವ ಮೂಲಕ ವರುಣ ಕೃಪೆ ತೋರಿದ್ದಾನೆ. ಸೋಮವಾರ ಜಿಲ್ಲೆಯ ಶೃಂಗೇರಿ, ಕೊಪ್ಪ, ಮೂಡಿಗೆರೆ, ಎನ್.ಆರ್.ಪುರ, ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಧಾರಾಕಾರವಾಗಿ ಮಳೆ ಸುರಿದಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಗುಡುಗು, ಮಿಂಚಿನೊಂದಿಗೆ ಆರಂಭವಾದ ವರುಣನ ಪ್ರವೇಶ ಆಲಿಕಲ್ಲುಗಳ ಸುರಿಮಳೆಯೊಂದಿಗೆ ಸುಮಾರು ಅರ್ಧಗಂಟೆಗಳ ಕಾಲ ಭರ್ಜರಿ ಮಳೆ ಸುರಿಯಿತು. ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಕೆಲವೆಡೆ ಸಾಧಾರಣ ಮಳೆಯಾಗಿದ್ದರೆ, ಮತ್ತೆ ಕೆಲವೆಡೆ ಧಾರಾಕಾರ ಮಳೆಯಾಗಿದೆ. ಚಿಕ್ಕಮಗಳೂರು ನಗರ, ಮೂಡಿಗೆರೆ, ಕಳಸ, ಕುದುರೆಮುಖ, ಆಲ್ದೂರು, ಬಾಳೂರು, ಕೊಟ್ಟಿಗೆಹಾರ, ಜಯಪುರ, ಕೊಪ್ಪ, ಬಾಳೆಹೊನ್ನೂರು, ಶೃಂಗೇರಿ ಪಟ್ಟಣಗಳಲ್ಲಿ ಸೋಮವಾರ ಸಂಜೆ ಎಡಬಿಡದೇ ಮಳೆಯಾದ ಬಗ್ಗೆ ವರದಿಯಾಗಿದೆ. ಸೋಮವಾರ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿತ್ತು.
ಸೋಮವಾರ ಜಿಲ್ಲೆಯಾದ್ಯಂತ ತಂಪೆರಚಿದ ಮಳೆ ಮಂಗಳವಾರ ಜಿಲ್ಲೆಯ ಕೆಲವೆಡೆ ಸುರಿಯುವ ಮೂಲಕ ಸತತ ಎರಡನೇ ದಿನವೂ ಜಿಲ್ಲೆಯಲ್ಲಿ ಮಳೆಯಾಗಿದೆ. ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಹ್ನದ ವೇಳೆ ಏಕಾಏಕಿ ದಿಢೀರ್ ಮಳೆ ಸುರಿಯಿತು. ದಿಢೀರ್ ಸುರಿದ ಮಳೆಗೆ ಸಾರ್ವಜನಿಕರು ನಗರದ ರಸ್ತೆಗಳಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಹರಸಾಹಸ ಪಡುತ್ತಿದ್ದ ದೃಶ್ಯಗಳು ಕಂಡು ಬಂದವು. ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದ್ದರೆ, ಕಡೂರು, ತರೀಕೆರೆ, ಕೊಪ್ಪ, ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ ವ್ಯಾಪ್ತಿಯಲ್ಲಿ ಗುಡುಗು ಮಿಂಚು ಸಹಿತ ತುಂತುರು ಮಳೆಯಾಗಿದೆ. ರಾತ್ರಿ ವೇಳೆ ಮಲೆನಾಡು ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುವ ನಿರೀಕ್ಷೆಯಲ್ಲಿ ರೈತರು, ಸಾರ್ವಜನಿಕರಿದ್ದಾರೆ. ಜಿಲ್ಲೆಯಲ್ಲಿ ಸೋಮವಾರ, ಮಂಗಳವಾರ ಸುರಿದ ಮಳೆಯಿಂದಾಗಿ ಭಾರೀ ಅನಾಹುತ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲವಾಗಿದ್ದು, ರವಿವಾರ ರಾತ್ರಿ ವೇಳೆ ಅಬ್ಬರಿಸಿದ ಮಳೆ ಸಿಡಿಲಿನ ಶಾಕ್ನಿಂದಾಗಿ ವ್ಯಕ್ತಿಯೊಬ್ಬರು ಅಸ್ವಸ್ಥಗೊಂಡಿರುವ ಘಟನೆಯೊಂದು ಮೂಡಿಗೆರೆ ತಾಲೂಕಿನ ಹಿರೇಬೈಲು ಗ್ರಾಮದಲ್ಲಿ ವರದಿಯಾಗಿದೆ.
ಒಟ್ಟಾರೆ ಮಳೆ ಇಲ್ಲದೇ ಬಿಸಿಲ ಝಳಕ್ಕೆ ಕಂಗಾಲಾಗಿದ್ದ ಸಾರ್ವಜನಿಕರು, ರೈತರು ಹಾಗೂ ಬೆಳೆಗಾರರು ಇದೀಗ ಜಿಲ್ಲೆಯಲ್ಲಿ ಸತತ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಸಂತಸ ಗೊಂಡಿದ್ದು, ಮಳೆಗಾಲ ಆರಂಭಕ್ಕೂ ಮುನ್ನ ಈ ತಿಂಗಳವ ಅವಧಿಯಲ್ಲಿ ಒಂದು ವಾರಗಳ ಕಾಲ ಮಳೆ ಸುರಿದಲ್ಲಿ ರೈತರು, ಬೆಳೆಗಾರರಿಗೆ ನೆರವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.