ಕಾಫಿನಾಡಿನಲ್ಲಿ ಮುಂದುವರೆದ ಮಳೆಯ ಸಿಂಚನ
ಚಿಕ್ಕಮಗಳೂರು, ಮೇ 22: ಕಾಫಿನಾಡಿನಲ್ಲಿ ಮಳೆಯ ಸಿಂಚನ ಮುಂದುವರಿದಿದ್ದು, ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ ತಾಲೂಕುಗಳ ವ್ಯಾಪ್ತಿಯಲ್ಲಿ ಬುಧವಾರ ಧಾರಾಕಾರ ಮಳೆಯಾದ ಬಗ್ಗೆ ವರದಿಯಾಗಿದೆ. ಜಿಲ್ಲೆಯ ವಿವಿಧೆಡೆ ಸತತವಾಗಿ ಮೂರು ದಿನಗಳಿಂದ ಮಳೆಯಾಗುತ್ತಿರುವುದರಿಂದ ಕಾಫಿ, ಅಡಿಕೆ ತೋಟಗಳಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿ
ಕಳೆದ ಸೋಮವಾರ ಹಾಗೂ ಮಂಗಳವಾರ ಜಿಲ್ಲೆಯ ವಿವಿಧೆಡೆ ಸುರಿದಿದ್ದ ಮಳೆ ಬುಧವಾರ ಮೂಡಿಗೆರೆ ಪಟ್ಟಣದ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಗುಡುಗು, ಸಿಡಿಲು ಸಹಿತ ಧಾರಾಕಾರವಾಗಿ ಮಳೆಯಾಗಿದೆ. ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಜಾವಳಿ, ಗೋಣಿಬೀಡು ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದ್ದರೇ, ಮತ್ತೆ ಕೆಲವೆಡೆ ತುಂತುರು ಮಳೆಯಾಗಿದೆ. ತಾಲೂಕಿನ ಕಳಸ ಪಟ್ಟಣದಲ್ಲಿ ಸಂಜೆ ವೇಳೆ ಸುಮಾರು ಅರ್ಧ ಗಂಟೆ ಮಳೆ ಸುರಿದ ಬಗ್ಗೆ ಮಳೆಯಾಗಿದೆ.
ಇನ್ನು ಜಿಲ್ಲೆಯ ಮಲೆನಾಡು ವ್ಯಾಪ್ತಿಯ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಕೆಲವೆಡೆ ಮಾತ್ರ ಬುಧವಾರ ಮಳೆಯಾದ ಬಗ್ಗೆ ವರದಿಯಾಗಿದೆ. ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಎನ್.ಆರ್.ಪುರ ತಾಲೂಕಿನ ಕೆಲ ಗ್ರಾಮಗಳು ಹಾಗೂ ಶೃಂಗೇರಿ ತಾಲೂಕಿನ ಅಗಳಗಂಡಿ, ನೆಮ್ಮಾರ್, ಕಿಗ್ಗಾ, ಬಿದರಗೋಡು, ಕೆರೆಕಟ್ಟೆ ಗ್ರಾಮ, ಕೊಪ್ಪ ತಾಲೂಕಿನ ಜಯಪುರ, ಮೇಗುಂದ, ಬಸರಿಕಟ್ಟೆ, ಕೊಗ್ರೆ ಮತ್ತಿತರ ಗ್ರಾಮಗಳಲ್ಲಿ ಬುಧವಾರ ಸಂಜೆ ವೇಳೆ ಸಾಧಾರಣ ಮಳೆಯಾಗಿದೆ.
ಚಿಕ್ಕಮಗಳೂರು ನಗರ ಹಾಗೂ ತಾಲೂಕಿನ ಕೆಲವೆಡೆ ಸೋಮವಾರ, ಮಂಗಳವಾರ ಕೆಲಹೊತ್ತು ಧಾರಾಕಾರವಾಗಿ ಸುರಿದಿದ್ದ ಮಳೆ ಬುಧವಾರ ನಾಪತ್ತೆಯಾಗಿತ್ತು. ನಗರ ಸೇರಿದಂತೆ ತಾಲೂಕಿನಾದ್ಯಂತ ಬುಧವಾರ ಮೋಡ ಕವಿದ ವಾತಾವರಣ ಇತ್ತಾದರೂ ಮಳೆಯ ದರ್ಶನವಾಗಲಿಲ್ಲ. ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯ ಕೆಲವೆಡೆ ತುಂತುರು ಮಳೆಯಾದ ಬಗ್ಗೆ ವರದಿಯಾಗಿದೆ.
ಕಳೆದ ಮೂರು ದಿನಗಳಿಂದ ಜಿಲ್ಲೆಯ ವಿವಿಧೆಡೆ ಬಿಸಿಲ ಧಗೆ ತಣಿಸುವ ಮಟ್ಟಿಗೆ ಅಲ್ಲಲ್ಲಿ ಮಳೆಯಾಗುತ್ತಿರುವುದರಿಂದ ಕಾಫಿನಾಡಿನಲ್ಲಿ ಕಾಫಿ, ಅಡಿಕೆ ಬೆಳೆಗಾರರು ಸಂತಸದಲ್ಲಿದ್ದು, ಕೃಷಿ ಚಟುವಟಿಕೆಯತ್ತ ಮುಖಮಾಡಿದ್ದಾರೆ. ಬಯಲುಸೀಮೆ ಭಾಗಗಳಲ್ಲಿ ಅಲ್ಲಲ್ಲಿ ಮಳೆಯಾಗಿರುವ ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆ ಆರಂಭಿಸಲು ಸದ್ಧತೆ ನಡೆಸಿದ್ದಾರೆ. ಸತತ ಮೂರು ದಿನಗಳಿಂದ ಅಲ್ಲಲ್ಲಿ ಸುರಿಯುತ್ತಿರುವ ಮಳೆರಾಯ 15 ದಿನಗಳ ಮಟ್ಟಿಗಾದರೂ ಪ್ರತಿದಿನ ಸುರಿದಲ್ಲಿ ಕೃಷಿ ಚಟುವಟಿಕೆಗೆ ಸಹಕಾರಿಯಾಗಲಿದೆ ಎಂಬ ಮಾತು ರೈತರು, ಬೆಳೆಗಾರರ ವಲಯದಿಂದ ಕೇಳಿ ಬರುತ್ತಿದೆ.