ಹಾಸನ ಜೆಡಿಎಸ್ ಕೋಟೆ ಭದ್ರ: ಪ್ರಜ್ವಲ್ ಗೆದ್ದರೂ ಕಾರ್ಯಕರ್ತರಲ್ಲಿಲ್ಲ ಸಂಭ್ರಮ !
'3 ತಿಂಗಳ ನಂತರ ನಾನೇ ಸಂಸದ' ಎಂದ ಸೋತ ಅಭ್ಯರ್ಥಿ ಎ ಮಂಜು
ಹಾಸನ: ಜಿಲ್ಲೆಯಲ್ಲಿ ಕಾಂಗ್ರೆಸ್ ಮೈತ್ರಿಯ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸುವ ಮೂಲಕ ದಳ ಕೋಟೆ ಭದ್ರವಾಗಿದ್ದು, ಆದರೆ ರಾಜ್ಯದಲ್ಲಿ ಪಕ್ಷದ ವರಿಷ್ಟ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಗೆಲುವು ಸಾಧಿಸದೇ ಮುಖಭಂಗ ಅನುಭವಿಸುವ ಸ್ಥಿತಿ ಬಂದಿದ್ದರಿಂದ ಪ್ರಜ್ವಲ್ ರೇವಣ್ಣ ಗೆದ್ದರೂ ಕಾರ್ಯಕರ್ತರ ಮುಖದಲ್ಲಿ ಯಾವ ಸಂಭ್ರಮವೂ ಕಾಣಿಸಲಿಲ್ಲ. ಜಿಲ್ಲೆಯ ಯಾವ ಭಾಗದಲ್ಲೂ ಸಂಭ್ರಮಾಚರಣೆ ನಡೆಯಲಿಲ್ಲ.
ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಿಜೆಪಿ ಅಭ್ಯರ್ಥಿ ಎ.ಮಂಜು ಮಾತನಾಡಿ, ನಾನು ಚುನಾವಣೆಯಲ್ಲಿ ಸೋತಿದ್ದಕ್ಕೆ ಬೇಸರವಿಲ್ಲ. ಇನ್ನು ಮೂರು ತಿಂಗಳು ಕಾದು ನೋಡಿ ನಾನೇ ಸಂಸತ್ಗೆ ಹೋಗುತ್ತೇನೆ. ಕಾನೂನು ಹೋರಾಟ ಮುಂದುವರಿಯುತ್ತದೆ. ದೇವೇಗೌಡರು ಕೊನೆಗಾಲದಲ್ಲಿ ಗೆಲ್ಲಬೇಕಿತ್ತು. ದೇವೇಗೌಡರು ಸೋತಿದ್ದಕ್ಕೆ ಬೇಸರವಿದೆ. ನನಗೆ ಹಾಸನದವನಾಗಿ ಬೇಸರ ಇದೆ ಎಂದು ದೇವೇಗೌಡರ ಸೋಲಿಗೆ ಬೇಸರ ವ್ಯಕ್ತಪಡಿಸಿದರು.
ಮೈತ್ರಿ ಲಾಭವಾಗಿದ್ದು ಕುಟುಂಬಕ್ಕೆ ಮಾತ್ರ. ಈಗಲಾದರೂ ನಮ್ಮ ನಾಯಕ ಸಿದ್ದರಾಮಯ್ಯ ಎಚ್ಚೆತ್ತುಕೊಳ್ಳಲಿ. ವಿಶ್ವನಾಥ್ ರಾಜೀನಾಮೆ ಕೊಟ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಸರ್ಕಾರ ಏನಾಗುತ್ತದೆಂದು ಕಾದು ನೋಡಬೇಕು ಎಂದರು. ಸೋಲಿನಿಂದ ಧೃತಿಗೆಟ್ಟಿಲ್ಲ. ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲಿ ಎಂದು ಸಲಹೆ ನೀಡಿದರು.