ಜೆಡಿಎಸ್ ಸಂಬಂಧ ತೊರೆದರೆ ಅಸ್ತಿತ್ವ ಉಳಿಯುತ್ತದೆ: ವಿಪ ಸದಸ್ಯ ಸಂದೇಶ್ ನಾಗರಾಜ
ಮಂಡ್ಯ, ಮೇ 27: ಕಾಂಗ್ರೆಸ್ ಜೆಡಿಎಸ್ ಜೊತೆ ಸೇರಿದಾಗಲೇ ಹೀನಾಯವಾಯಿತು. ಜೆಡಿಎಸ್ ಜೊತೆಗಿನ ಸಂಬಂಧ ಬಿಟ್ಟರೆ ಅಸ್ತಿತ್ವ ಉಳಿಸಿಕೊಳ್ಳುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಹೇಳಿದ್ದಾರೆ.
ಸೋಮವಾರ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಜೆಡಿಎಸ್ ಜೊತೆಗಿನ ಸಂಬಂಧ ಬಿಡದಿದ್ದರೆ ಈಗ ಗೆದ್ದಿರುವ ಒಂದು ಸೀಟನ್ನೂ ಮುಂದೆ ಕಳೆದುಕೊಳ್ಳಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಆರಂಭದಿಂದಲೂ ಸುಮಲತಾ ಗೆಲ್ಲುತ್ತಾರೆಂದು ನಮಗೆ ಗೊತ್ತಿತ್ತು. ಅದರಲ್ಲಿ ಯಾವುದೇ ಅನುಮಾನ ಇರಲಿಲ್ಲ. ಕಡಿಮೆ ಎಂದರೂ ಒಂದು ಲಕ್ಷ ಮತಗಳಿಂದ ಗೆಲ್ಲಲಿದ್ದಾರೆ ಎಂದು ಹೇಳಿದ್ದೆ ಎಂದು ಅವರು ಹೇಳಿದರು.
ನಿಖಿಲ್ ಸೋತರೆ ರಾಜಕೀಯ ನಿವೃತ್ತಿ ಅಥವಾ ಸನ್ಯಾಸತ್ವ ತೆಗೆದುಕೊಳ್ಳುವುದಾಗಿ ಸಚಿವ ಪುಟ್ಟರಾಜು ಹೇಳಿದ್ದರು. ಸಚಿವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಮಂತ್ರಿಗಳು ಸುಳ್ಳು ಹೇಳಬಾರದು ಎಂದು ಅವರು ತಿರುಗೇಟು ನೀಡಿದರು.
ತಮ್ಮ ನಿರ್ಮಾಣದ ಅಭಿಷೇಕ್ ಅಂಬರೀಷ್ ನಟಿಸಿರುವ ಅಮರ್ ಚಿತ್ರ ಈ ವಾರ ಬಿಡುಗಡೆಯಾಗಲಿದ್ದು, ಅಭಿಷೇಕ್ ಅವರು ಪ್ರಥಮ ಚಿತ್ರದಲ್ಲೇ ಉತ್ತಮವಾಗಿ ನಟಿಸಿದ್ದಾರೆ. ನಿರ್ದೇಶಕ ನಾಗಶೇಖರ್ ಉತ್ತಮ ಚಿತ್ರವನ್ನು ರೂಪಿಸಿದ್ದಾರೆ ಎಂದು ಅವರು ತಿಳಿಸಿದರು.