ವಿರಾಜಪೇಟೆ: ರಸ್ತೆ ಅಪಘಾತಕ್ಕೆ ಓರ್ವ ಬಲಿ
ಮಡಿಕೇರಿ, ಮೇ 29: ಬೈಕ್ ಅವಘಡಕ್ಕೀಡಾಗಿ ಓರ್ವ ಮೃತಪಟ್ಟ ಘಟನೆ ವಿರಾಜಪೇಟೆ ಸಮೀಪದ ಬಿಟ್ಟಂಗಾಲದಲ್ಲಿ ನಡೆದಿದೆ.
ಬಾಳುಗೋಡು ನಿವಾಸಿ ಶಶಿ(35) ಮೃತಪಟ್ಟ ವ್ಯಕ್ತಿ. ಮಂಗಳವಾರ ವೀರಾಜಪೇಟೆ ಪಟ್ಟಣಕ್ಕೆ ಆಗಮಿಸಿದ್ದ ಶಶಿ ರಾತ್ರಿ 9 ಗಂಟೆ ಸುಮಾರಿಗೆ ತಮ್ಮ ಬೈಕ್ನಲ್ಲಿ ಬಿಟ್ಟಂಗಾಲ ಮಾರ್ಗವಾಗಿ ಬಾಳುಗೋಡುವಿಗೆ ತೆರಳುತ್ತಿದ್ದರೆನ್ನಲಾಗಿದ್ದು, ಬಿಟ್ಟಂಗಾಲದ ಯಜ್ಞ ರೆಸ್ಟೋರೆಂಟ್ ಬಳಿ ಶಶಿ ಅವರ ನಿಯಂತ್ರಣ ತಪ್ಪಿ ಬೈಕ್ ರಸ್ತೆ ಬದಿಯ ಮಣ್ಣಿನ ದಿಬ್ಬಕ್ಕೆ ಢಿಕ್ಕಿಯಾಗಿದೆ.
ಈ ಸಂದರ್ಭ ಗಂಭೀರವಾಗಿ ಗಾಯಗೊಂಡಿದ್ದ ಶಶಿ ಅವರನ್ನು ಸ್ಥಳೀಯರು ವೀರಾಜಪೇಟೆ ಆಸ್ಪತ್ರೆಗೆ ಕರೆತಂದಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುವನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶಶಿ ರಾತ್ರಿಯೇ ಕೊನೆಯುಸಿರೆಳೆದಿದ್ದು, ವೀರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಶಿ ಹೆಲ್ಮೆಟ್ ಧರಿಸಿದ್ದಲ್ಲಿ ಬದುಕಿ ಉಳಿಯುವ ಸಾಧ್ಯತೆ ಹೆಚ್ಚಿತ್ತು ಎಂದು ಠಾಣಾಧಿಕಾರಿ ಸುರೇಶ್ ಬೋಪಣ್ಣ ಅವರು ತಿಳಿಸಿದ್ದಾರೆ.