ಕಲಬುರಗಿ: ಬಾಲ್ಯ ವಿವಾಹ ತಡೆಯಲು ಯಶಸ್ವಿಯಾದ ಅಧಿಕಾರಿಗಳು
ಕಲಬುರಗಿ, ಮೇ 29: ಚಿಂಚೋಳಿ ತಾಲೂಕಿನ ಕಲ್ಲೂರು ರೋಡ್ ಗ್ರಾಮದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಬಾಲ್ಯವಿಹಾವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಪೊಲೀಸ್ ಹಾಗೂ ಮಾರ್ಗದರ್ಶಿ ಸಂಸ್ಥೆಯ ಚೈಲ್ಡ್ಲೈನ್ ಉಪಕೇಂದ್ರದ ಅಧಿಕಾರಿಗಳು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲಕಿಯ ಮದುವೆ ಸಿದ್ಧತೆಗಳು ನಡೆಯುತ್ತಿರುವುದರ ಮಾಹಿತಿ ಪಡೆದ ಶಿಶು ಅಭಿವೃದ್ದಿ ಯೋಜನಾಧಿಕಾರಿ ಭೀಮಸೇನ್ ಚೌವ್ಹಾಣ, ಮಾರ್ಗದರ್ಶಿ ಸಂಸ್ಥೆಯ ಚೈಲ್ಡ್ಲೈನ್ ಉಪಕೇಂದ್ರದ ನಿರ್ದೇಶಕ ಆನಂದ್ರಾಜ್ ಹಾಗೂ ಮಿರಿಯಾಣ ಠಾಣೆಯ ಪಿಎಸೈ ಸಂತೋಷ ರಾಠೋಡ ಮದುವೆ ನಡೆಸಲು ಸಿದ್ಧತೆ ನಡೆಸುತ್ತಿದ್ದ ಮನೆಗೆ ಹೋಗಿ ಕುಟುಂಬಸ್ಥರಿಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಮದುವೆ ನಿಲ್ಲಿಸಲಾಗಿದೆ.
ಬಾಲಕಿಯ ತಂದೆ-ತಾಯಿ ಇಬ್ಬರು ತೀರಿಕೊಂಡಿದ್ದು, ಅಣ್ಣ, ಚಿಕ್ಕಪ್ಪ, ಚಿಕ್ಕಮ್ಮ ಮದುವೆ ಮಾಡಿಕೊಡಲು ಸಿದ್ಧತೆ ನಡೆಸುತ್ತಿದ್ದರು. ಈ ವಿಷಯ ತಿಳಿದ ಅಧಿಕಾರಿಗಳು ಕುಟುಂಬಸ್ತರಿಗೆ ಬಾಲ್ಯ ವಿವಾಹದಿಂದ ಮುಂದೆ ಎದುರಾಗಬಹುದಾದ ಸಮಸ್ಯೆಗಳ ಕುರಿತು ಹೇಳುವ ಮೂಲಕ ಬಾಲ್ಯವಿವಾಹವನ್ನು ನಿಲ್ಲಿಸಲು ಯಶಸ್ವಿಯಾಗಿದ್ದಾರೆ.