ಚೂರಿ ಇರಿದು ವ್ಯಕ್ತಿಯ ಕೊಲೆಗೆ ಯತ್ನ
ದಾವಣಗೆರೆ: ವ್ಯಕ್ತಿಯೊಬ್ಬನ ಕುತ್ತಿಗೆಯನ್ನು ಚಾಕುವಿನಿಂದ ಇರಿದು ಕೊಲೆಗೆ ಪ್ರಯತ್ನಿಸಿದ ಘಟನೆ ಇಲ್ಲಿನ ಜಯದೇವ ವೃತ್ತ ಸಮೀಪದ ಮಧುಮಿತ್ರ ಬಾರ್ ನಲ್ಲಿ ಶನಿವಾರ ಹಾಡ ಹಗಲೇ ನಡೆದಿದೆ.
ನಗರದ ಹೊರ ವಲಯದ ಶ್ರೀರಾಮ ನಗರದ ವಾಸಿ ಅರುಣ ಎಂಬಾತನಿಗೆ ಆತನ ಸ್ನೇಹಿತ ಎನ್ನಲಾದ ಪ್ರತಾಪ್ ಚಾಕುವಿನಿಂದ ಕುತ್ತಿಗೆಯನ್ನು ಇರಿದಿದ್ದಾನೆ.
ಇಲ್ಲಿನ ಮಧು ಮಿತ್ರ ಬಾರ್ ಗೆ ಮಧ್ಯಾಹ್ನ ಕೆಲವು ಯುವಕರು ಬಂದಿದ್ದು, ಈ ವೇಳೆ ಪ್ರತಾಪ ಮತ್ತು ಅರುಣನ ಮಧ್ಯೆ ಹೆಣ್ಣಿನ ವಿಚಾರಕ್ಕೆ ಮಾತಿನ ಚಕಮಕಿಯಾಗಿದೆ. ಈ ವೇಳೇ ಪ್ರತಾಪ ಹಿಂಬಂದಿಯಿಂದ ಅರುಣನ ಕುತ್ತಿಗೆಯನ್ನು ಸೀಳಿದ್ದಾನೆ. ದೃಶ್ಯಗಳು ಬಾರ್ ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪ್ರತಾಪನು ಚಾಕುವಿನಿಂದ ಅರುಣನ ಕುತ್ತಿಗೆಯನ್ನು ಕುಯ್ಯುತ್ತಿದ್ದಂತೆ ಇಬ್ಬರ ಜೊತೆಗಿದ್ದವರು ಓಡಿದ್ದಾರೆ ಎನ್ನಲಾಗಿದೆ.
ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡ ಅರುಣನನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.
ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ನಡೆಸಲಾಗಿದೆ.