ಸ್ಥಳೀಯ ಸಂಸ್ಥೆ ಚುನಾವಣೆ: ಶಿವಮೊಗ್ಗ ಜಿಲ್ಲೆಯಲ್ಲಿ ಮೈತ್ರಿಕೂಟಕ್ಕೆ ಮುನ್ನಡೆ, ಬಿಜೆಪಿಗೆ ತೀವ್ರ ಹಿನ್ನಡೆ
ಶಿವಮೊಗ್ಗ, ಜೂ. 3: ಜಿಲ್ಲೆಯ 1 ನಗರಸಭೆ, 1 ಪುರಸಭೆ ಹಾಗೂ ಮೂರು ಪಟ್ಟಣ ಪಂಚಾಯತ್ ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಉತ್ತಮ ಸಾಧನೆ ಮಾಡಿದೆ. ಬಿಜೆಪಿ ಭಾರೀ ಹಿನ್ನಡೆ ಅನುಭವಿಸಿದೆ.
ಶಿಕಾರಿಪುರ ಪುರಸಭೆ, ಶಿರಾಳಕೊಪ್ಪ ಹಾಗೂ ಹೊಸನಗರ ಪಟ್ಟಣ ಪಂಚಾಯತ್ ಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಲಭ್ಯವಾಗಿದೆ. ಅಧಿಕಾರದ ಗದ್ದುಗೆಯೇರುವುದು ಖಚಿತವಾಗಿದೆ. ಸೊರಬದಲ್ಲಿ ಯಾರಿಗೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಬಿಜೆಪಿಯು ಮೈತ್ರಿಕೂಟಕ್ಕಿಂತ ಒಂದು ಸ್ಥಾನ ಹೆಚ್ಚು ಗೆದ್ದಿದ್ದು, ಅಧಿಕಾರದ ಗದ್ದುಗೆಯೇರುವುದು ಯಾರೆಂಬ ಕುತೂಹಲ ಕೆರಳಿಸಿದೆ. ಉಳಿದಂತೆ ಸಾಗರ ನಗರಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು, ಆಡಳಿತದ ಚುಕ್ಕಾಣಿ ಹಿಡಿಯುವಲ್ಲಿ ಸಫಲವಾಗಿದೆ.
ವಿವರ: ಸಾಗರ ನಗರಸಭೆಯ 31 ವಾರ್ಡ್ಗಳಲ್ಲಿ ಬಿಜೆಪಿ 16 ಸ್ಥಾನದಲ್ಲಿ ಜಯ ಸಾಧಿಸಿದೆ. ಉಳಿದಂತೆ ಕಾಂಗ್ರೆಸ್ 9, ಜೆಡಿಎಸ್ 1 ಹಾಗೂ 5 ಕಡೆ ಪಕ್ಷೇತರ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಸರಳ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೇರುವುದು ಖಚಿತವಾಗಿದೆ. ಈ ಹಿಂದೆ ಕಾಂಗ್ರೆಸ್ ವಶದಲ್ಲಿದ್ದ ಆಡಳಿತವನ್ನು ಬಿಜೆಪಿ ತನ್ನ ವಶಕ್ಕೆ ಪಡೆಯುವಲ್ಲಿ ಸಫಲವಾಗಿದೆ.
ಶಿಕಾರಿಪುರ ಪುರಸಭೆಯ 23 ವಾರ್ಡ್ಗಳಲ್ಲಿ ಕಾಂಗ್ರೆಸ್ ಅತ್ಯದಿಕ 12 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಬಿಜೆಪಿ 8 ಹಾಗೂ ಮೂವರು ಪಕ್ಷೇತರ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಜೆಡಿಎಸ್ ಸಾಧನೆ ಶೂನ್ಯವಾಗಿದೆ. ಕಾಂಗ್ರೆಸ್ ಅಧಿಕಾರದ ಗದ್ದುಗೆಯೇರುವುದು ನಿಶ್ಚಿತವಾಗಿದೆ. ಉಳಿದಂತೆ ಇದೇ ತಾಲೂಕಿನ ಶಿರಾಳಕೊಪ್ಪದ ಪಟ್ಟಣ ಪಂಚಾಯತ್ ನ 17 ವಾರ್ಡ್ಗಳಲ್ಲಿ ಕಾಂಗ್ರೆಸ್ 7, ಜೆಡಿಎಸ್ 3, ಪಕ್ಷೇತರ 5 ಹಾಗೂ ಬಿಜೆಪಿಯ 2 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಈ ಎರಡು ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಪಕ್ಷ ಆಡಳಿತದಲ್ಲಿತ್ತು.
ಸೊರಬದ 12 ವಾರ್ಡ್ಗಳಲ್ಲಿ ಕಾಂಗ್ರೆಸ್ 4, ಜೆಡಿಎಸ್ 1, ಬಿಜೆಪಿ 6 ಹಾಗೂ ಪಕ್ಷೇತರ 1 ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಇಲ್ಲಿ ಯಾರಿಗೂ ಸ್ಪಷ್ಟ ಬಹುಮತ ಲಭ್ಯವಾಗಿಲ್ಲ. ಅಧಿಕಾರದ ಗದ್ದುಗೆಯೇರುವುದು ಯಾರೆಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.
ಹೊಸನಗರ ಪಟ್ಟಣ ಪಂಚಾಯತ್ ನ 11 ಸ್ಥಾನಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು 7 ಸ್ಥಾನದಲ್ಲಿ ಜಯಭೇರಿ ಬಾರಿಸಿದ್ದಾರೆ. ಕಾಂಗ್ರೆಸ್ 4, ಜೆಡಿಎಸ್ 3 ಹಾಗೂ ಬಿಜೆಪಿ ಪಕ್ಷದ 4 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಸರಳ ಬಹುಮತದೊಂದಿಗೆ ಮೈತ್ರಿಕೂಟ ಅಧಿಕಾರದ ಗದ್ದುಗೆಯೇರುವುದು ಖಚಿತವಾಗಿದೆ.
ಉಲ್ಟಾ: ಇತ್ತೀಚೆಗೆ ಪೂರ್ಣಗೊಂಡ ಲೋಕಸಭೆ ಚುನಾವಣೆಯಲ್ಲಿ, ಬಿಜೆಪಿ ಪಕ್ಷವು ಭಾರೀ ಮತಗಳ ಅಂತರದಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಜಯ ಸಾಧಿಸಿತ್ತು. ಮೈತ್ರಿಕೂಟ ಭಾರೀ ಮುಖಭಂಗಕ್ಕೀಡಾಗಿತ್ತು. ಇದೇ ಹುಮ್ಮಸ್ಸಿನಲ್ಲಿದ್ದ ಬಿಜೆಪಿಯು ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಮುನ್ನಡೆ ಸಾಧಿಸುವ ಉಮೇದಿನಲ್ಲಿತ್ತು. ಬಹುತೇಕ ಕಡೆ ಅಧಿಕಾರದ ಚುಕ್ಕಾಣಿ ಹಿಡಿಯುವ ನಿರೀಕ್ಷೆಯಲ್ಲಿತ್ತು.
ಇನ್ನೊಂದೆಡೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದವು. ಲೋಕಸಭೆ ಚುನಾವಣೆ ಸೋಲಿನ ಕರಿನೆರಳಿನಲ್ಲಿಯೇ ಚುನಾವಣೆ ಎದುರಿಸಿತ್ತು. ಆದರೆ ಮತದಾರರ ಅನಿರೀಕ್ಷಿತ ಬೆಂಬಲವು ಮೈತ್ರಿ ನಾಯಕರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಇನ್ನೊಂದೆಡೆ ಬಿಜೆಪಿ ಲೆಕ್ಕಾಚಾರಗಳೆಲ್ಲ ಉಲ್ಟಾವಾಗಿದ್ದು, ಈ ಫಲಿತಾಂಶವು ಲೋಕಸಭೆ ಜಯದ ಗುಂಗಿನಿಂದ ಹೊರಬರುವಂತೆ ಮಾಡಿದೆ.