ಜೆಡಿಎಸ್ದೊಂದಿಗೆ ಮೈತ್ರಿ ಮಾಡಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಸೂಚನೆ
ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಪ್ರಕಟ
ಬೆಂಗಳೂರು, ಜೂ.4: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅತಂತ್ರ ಪರಿಸ್ಥಿತಿ ಇರುವ ಕಡೆಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.
ರಾಜ್ಯದ 61 ನಗರ ಸ್ಥಳೀಯ ಸಂಸ್ಥೆಗಳಿಗೆ ಎರಡನೆ ಹಂತದಲ್ಲಿ ಚುನಾವಣೆ ನಡೆದಿದ್ದು, ಜೂ.3ಕ್ಕೆ ಎಲ್ಲದರ ಫಲಿತಾಂಶ ಪ್ರಕಟವಾಗಿದೆ. ಅತ್ಯಧಿಕ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದ್ದರೂ ಸ್ವತಂತ್ರವಾಗಿ ಆಡಳಿತ ನಡೆಸುವಷ್ಟು ಸ್ಥಾನಗಳು ಲಭ್ಯವಾಗಿಲ್ಲ. ಆದುದರಿಂದಾಗಿ, ಅಗತ್ಯವಿರುವ ಕಡೆ ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರೊಂದಿಗೆ ಸೇರಿ ಆಡಳಿತ ವ್ಯವಸ್ಥೆ ರಚಿಸುವಂತೆ ಗುಂಡೂರಾವ್ ಹೇಳಿದ್ದಾರೆ.
ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಸ್ಥಳೀಯ ಸಂಸ್ಥೆಗಳಲ್ಲಿಯೂ ಜೆಡಿಎಸ್ ಸಹಕಾರದೊಂದಿಗೆ ಅಧಿಕಾರ ಹಿಡಿದು, ಜೆಡಿಎಸ್ಗೆ ಬಹುಮತ ಇರುವ ಕಡೆ ಅವರಿಗೆ ಸಹಕಾರ ನೀಡುವಂತೆ ಗುಂಡೂರಾವ್ ಪಕ್ಷದ ಸ್ಥಳೀಯ ನಾಯಕರಿಗೆ ಸೂಚನೆ ನೀಡಿದ್ದಾರೆ. ಎರಡೂ ಪಕ್ಷಗಳ ಹೊರತಾಗಿ ಸಂಖ್ಯಾಬಲ ಕಡಿಮೆ ಇರುವ ಕಡೆಗಳಲ್ಲಿ ಪಕ್ಷೇತರರ ಬೆಂಬಲ ಪಡೆಯುವಂತೆ ತಿಳಿಸಿದ್ದು, ಯಾವುದೇ ಕಾರಣಕ್ಕೂ ಬಿಜೆಪಿ ಜತೆಗೆ ಸ್ಥಳೀಯವಾಗಿ ಹೊಂದಾಣಿಕೆ ಮಾಡಿಕೊಳ್ಳದಂತೆ ಸೂಚಿಸಿದ್ದಾರೆ.
ತೀರಾ ಬಿಕ್ಕಟ್ಟಿನ ಸಂದರ್ಭ ಬಂದರೆ ಕೆಪಿಸಿಸಿಯೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆ ಪರಿಹರಿಸಿಕೊಂಡು ಅಧಿಕಾರ ಹಿಡಿಯುವಂತೆ ದಿನೇಶ್ ಗುಂಡೂರಾವ್ ಕೆಳಹಂತದ ನಾಯಕರುಗಳಿಗೆ ಸೂಚನೆ ನೀಡಿದ್ದಾರೆ.