‘ಉದ್ಯೋಗ ಖಾತ್ರಿ ಯೋಜನೆ ಅಭಿವೃದ್ಧಿಗೆ ಪೂರಕ’
ಹನೂರು, ಜೂ.6: ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಜನರ ಜೀವನೋಪಾಯ ಮತ್ತು ಮಗ್ರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕೌದಳ್ಳಿ ಗ್ರಾಮ ಪಂಚಾಯತ್ ಪಿಡಿಒ ಪ್ರದೀಪ್ ಹೇಳಿದ್ದಾರೆ.
ಹನೂರು ತಾಲೂಕಿನ ಕೌದಳ್ಳಿ ಗ್ರಾಮ ಪಂಚಾಯತ್ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಸಾಂವಿಧಾನಿಕ ಕಾಯ್ದೆಯಾಗಿದ್ದು 18 ವರ್ಷ ತುಂಬಿದ ಎಲ್ಲಾ ಪುರುಷ ಮತ್ತು ಮಹಿಳೆಯರು ನರೇಗಾ ಮೂಲಕ ಉದ್ಯೋಗ ಕಂಡುಕೊಳ್ಳಬಹುದು. ದಿನಕ್ಕೆ 249 ರೂ. ಕೂಲಿ ಇದ್ದು 100 ದಿನಗಳ ತನಕ ಕೆಲಸ ಮಾಡಲು ಅವಕಾಶವಿದೆ ಎಂದರು.
ವೈಯಕ್ತಿಕ ಮತ್ತು ಸಮುದಾಯ ಅಭಿವೃದ್ಧಿ ಯೊಜನೆಗೆ ಅವಕಾಶವಿದ್ದು, ರೈತರು ತಮ್ಮ ಜಮೀನುಗಳಲ್ಲಿ ಅರಣ್ಯ ಸಸಿಗಳನ್ನು, ತೋಟಗಾರಿಕಾ ಸಸಿಗಳನ್ನು ಬೆಳೆಸಲು, ಕೃಷಿ ಹೊಂಡ ನಿರ್ಮಿಸಲು, ದನದ ಕೊಟ್ಟಿಗೆ ನಿರ್ಮಿಸಲು ಅವಕಾಶವಿದೆ ಎಂದರು. ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳಲ್ಲಿ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ಮಾಡಲು ಚರ್ಚಿಸಿ ಗ್ರಾಮ ಪಂಚಾಯತ್ಗೆ ಮನವಿ ನೀಡಿದ್ದಲ್ಲಿ ಕ್ರಿಯಾ ಯೋಜನೆ ಮಾಡಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ನರೇಗಾ ಯೋಜನೆಯ ತಾಲೂಕು ಸಂಯೋಜಕ ನಾರಾಯಣ್ರವರು ಮಾತನಾಡಿ ಕಳೆದ 6 ತಿಂಗಳ ಅವಧಿಯಲ್ಲಿ 160 ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, 14,56,447 ರೂ. ಅನುದಾನವನ್ನು ಬಳಕೆ ವ ಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಕಂದಾಯ ಇಲಾಖೆ ಸಿಬ್ಬಂದಿಯ ಗೈರು:
ಸಾಮಾಜಿಕ ಭದ್ರತಾ ಸುರಕ್ಷಾ ಯೋಜನೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಜನರು ಗ್ರಾಮಸಭೆಗೆ ಹಾಜರಾಗಿದ್ದು ಕಂದಾಯ ಇಲಾಖೆ ಸಿಬ್ಬಂದಿ ಗೈರು ಹಾಜರಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು. ಸಂಧ್ಯಾ ಸುರಕ್ಷಾ ಯೋಜನೆ, ವೃದ್ಧಾಪ್ಯ ಯೋಜನೆ, ವಿಧವಾವೇತನ ಮುಂತಾದ ಯೋಜನೆಗಳಿಗೆ ಸಂಬಂಧಿಸಿದಂತೆ ದಾಖಲಾತಿ ಮತ್ತು ದೂರು ನೀಡಲು ಬಂದಿದ್ದ ಜನರು ಗ್ರಾಮ ಪಂಚಾಯತ್ ಪಿಡಿಒ ಹಾಗೂ ತಾಪಂ ಸಂಯೋಜಕರ ಬಳಿ ತಮ್ಮ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಜಯಕಾಂತ, ಅಭಿಯಂತರರಾದ ಪ್ರೇಮಾ, ಬಿಲ್ ಕಲೆಕ್ಟರ್ ದೊರೆ, ಗ್ರಾಪಂ ಸದಸ್ಯರುಮತ್ತಿತರರು ಉಪಸ್ಥಿತರಿದ್ದರು.