ತುಮಕೂರಲ್ಲಿ ಸಬ್ ಅರ್ಬನ್ ರೈಲು ಸಂಚಾರಕ್ಕೆ ಚಿಂತನೆ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್
ತುಮಕೂರು, ಜೂ.7: ಸ್ಮಾರ್ಟ್ಸಿಟಿ ಯೋಜನೆಯಡಿ ಮಹಾತ್ಮ ಗಾಂಧಿ ಆಟದ ಮೈದಾನ, ಅಮಾನಿಕೆರೆ ಪುನಶ್ಚೇತನ, ಜಿಲ್ಲಾ ಆಸ್ಪತ್ರೆ, ಬಸ್ ನಿಲ್ದಾಣ, ಸರಕಾರಿ ಪದವಿ ಪೂರ್ವ ಕಾಲೇಜು, ಡಿಜಿಟಲ್ ಗ್ರಂಥಾಲಯ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಬೆಂಗಳೂರಿನಿಂದ ತುಮಕೂರು ಜಿಲ್ಲೆಗೆ ಮೆಟ್ರೋ ರೈಲು ಬದಲು ಸಬ್ಅರ್ಬನ್ ರೈಲು ತರಲು ಚಿಂತಿಸಲಾಗಿದೆ. ಪ್ರತಿ 10 ನಿಮಿಷಕ್ಕೊಮ್ಮೆ ರೈಲು ಸಂಚರಿಸುವಂತೆ ಮಾಡಲಾಗುವುದು. ಸಬ್ ಅರ್ಬನ್ ರೈಲಿಗೆ ಪ್ರತ್ಯೇಕ ಹಳಿ ಹಾಕಲಾಗುವುದು ಎಂದರು.
ತುಮಕೂರು ಸ್ಮಾರ್ಟ್ಸಿಟಿ ಯೋಜನೆಯಡಿ ಕೇಂದ್ರ ಸರಕಾರ 1 ಸಾವಿರ ಕೋಟಿ ರೂ. ನೀಡಲಿದೆ. ಜೊತೆಗೆ ರಾಜ್ಯ ಸರಕಾರ ಕೂಡ ತುಮಕೂರು ಅಭಿವೃದ್ದಿಗೆ 125 ಕೋಟಿ ರೂ. ಮೀಸಲಿಡಲಾಗಿದೆ. ತುಮಕೂರು ಎಲ್ಲ ರಂಗದಲ್ಲೂ ಸ್ಮಾರ್ಟ್ ಸಿಟಿ ಆಗಲಿದೆ. 67 ಕೋಟಿ ರೂ. ಗೆ ಕ್ಯಾನ್ಸರ್ ಆಸ್ಪತ್ರೆ, 50 ಕೋಟಿ ವೆಚ್ಚದಲ್ಲಿ ಕ್ರೀಡಾ ಮೈದಾನ ಸೇರಿದಂತೆ 525 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಇಂದು ಉದ್ಘಾಟಿಸಿದೆ. ಅವಧಿಗೂ ಮುನ್ನವೇ ಈ ಎಲ್ಲಾ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನು ಕೆಲವೇ ವರ್ಷದಲ್ಲಿ ತುಮಕೂರು ಸಿಟಿ ದೇಶದಲ್ಲೇ ಮಾದರಿ ಸಿಟಿಯಾಗಿ ಹೊರಹೊಮ್ಮುವ ವಿಶ್ವಾಸವಿದೆ ಎಂದರು.
ತುಮಕೂರ ಸ್ಮಾರ್ಟ್ಸಿಟಿ ಯೋಜನೆಗೆ ಕೇಂದ್ರ ಸರಕಾರ ಇನ್ನಷ್ಟು ಹಣ ನೀಡಿದರೆ ಒಳಿತು. ತುಮಕೂರು ಹಿಂದಿನಿಂದಲೂ ನಿರ್ಲಕ್ಷ್ಯಕ್ಕೆ ಒಳಗಾದ ಸಿಟಿಯಾಗಿತ್ತು. ಈಗ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಬಳಸಿಕೊಂಡು ತುಮಕೂರು ದೊಡ್ಡ ಸಿಟಿಯಾಗಿ ಬೆಳೆಯಬೇಕು ಎಂದರು.
ಬೆಂಗಳೂರಿನಲ್ಲಿ ಇರುವ ಕಬ್ಬನ್ ಪಾರ್ಕ್ ಅಥವಾ ಲಾಲ್ಬಾಗ್ ಮಾದರಿಯಲ್ಲಿ ತುಮಕೂರಿನಲ್ಲಿ 100 ಎಕರೆ ಯಲ್ಲಿ ಪಾರ್ಕ್ ನಿರ್ಮಾಣ ಮಾಡುವುದು ಅಗತ್ಯವಿದೆ ಎಂದರು.