ಕೋಲಾರ ಎಸ್ಪಿಯನ್ನು ಬಂಧಿಸಲು ಆದೇಶಿಸಿ ಬಳಿಕ ಹಿಂಪಡೆದ ಹೈ ಕೋರ್ಟ್
ಕೋಲಾರ : ಪ್ರಕರಣವೊಂದರ ಸಂಬಂಧ ಕೋಲಾರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ರೋಹಿಣಿ ಸೆಪಟ್ ಕಟೋಚ್ ಅವರನ್ನು ಬಂಧಿಸಲು ಡಿಜಿಪಿಗೆ ಹೊರಡಿಸಿದ್ದ ತನ್ನದೇ ಆದೇಶವನ್ನು ಹೈಕೋರ್ಟ್ ಶುಕ್ರವಾರ ಹಿಂಪಡೆದಿದೆ.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಉಪ ವಿಭಾಗಾಧಿಕಾರಿ (ಎಸಿ) ಮತ್ತು ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಎಂಜಿನಿಯರ್ (ಇಎ) ಅವರನ್ನು ಬಂಧಿಸಿ -ವಿಚಾರಣೆಗೆ ಹಾಜರುಪಡಿಸುವಂತೆ ನ್ಯಾಯಾಲಯ ನಿರ್ದೇಶಿಸಿತ್ತು.
ಆದರೆ, ರೋಹಿಣಿ ಸೆಪಟ್ ಈ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಎಸ್ಪಿ ರೋಹಿಣಿ ವಿರುದ್ಧ ಹೈಕೋರ್ಟ್ ಬಂಧನ ವಾರಂಟ್ ಹೊರಡಿಸಿತ್ತು. ಈ ವಿಷಯ ತಿಳಿದ ಕೂಡಲೇ ಮಧ್ಯಾಹ್ನದ ಕಲಾಪಕ್ಕೆ ರೋಹಿಣಿ ಅವರು ವಿಚಾರಣೆಗೆ ಖುದ್ದು ಹಾಜರಾದರು. ಹೀಗಾಗಿ ನ್ಯಾಯಾಲಯವು ಆ ತಪ್ಪನ್ನು ಮನ್ನಿಸಿ, ರೋಹಿಣಿ ವಿರುದ್ಧ ಬಂಧನ ವಾರೆಂಟ್ ಹಿಂಪಡೆಯಬೇಕು ಎಂದು ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ ಕೋರಿದ ಹಿನ್ನೆಲೆಯಲ್ಲಿ ವಾರಂಟ್ ಹಿಂಪಡೆದಿದೆ.
ಈ ಹಿನ್ನೆಲೆಯಲ್ಲಿ ರೋಹಿಣಿ ಕಟೋಜ್ ಸೆಪೆಟ್ ಅವರನ್ನು ಬೆಂಗಳೂರು ವಲಯಕ್ಕೆ ವರ್ಗಾವಣೆ ಮಾಡಲಾಗಿದೆ.