ಏಳು ವರ್ಷಗಳಲ್ಲಿ ರಾಜ್ಯದಲ್ಲಿ ದಾಖಲಾದ ಬಾಲ್ಯ ವಿವಾಹ ಪ್ರಕರಣಗಳೆಷ್ಟು ಗೊತ್ತಾ ?
ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.10: ಬಾಲ್ಯ ವಿವಾಹ ಪದ್ದತಿಯನ್ನು ತಡೆಗಟ್ಟಲು ಸರಕಾರ ಹಾಗೂ ಸರಕಾರೇತರ ಸಂಘ ಸಂಸ್ಥೆಗಳು ಸಾಕಷ್ಟು ಪ್ರಯತ್ನ ಪಡುತ್ತಿದ್ದರೂ ರಾಜ್ಯದಲ್ಲಿ ಕಳೆದ ಏಳು ವರ್ಷಗಳಲ್ಲಿ 303 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿವೆ. ಬಡತನ, ಅನಕ್ಷರತೆ, ಮೂಢನಂಬಿಕೆ, ಸಂಪ್ರದಾಯ ಹಾಗೂ ಅರಿವಿನ ಕೊರತೆ ಬಾಲ್ಯ ವಿವಾಹಕ್ಕೆ ಪ್ರಮುಖ ಕಾರಣಗಳಾಗಿದ್ದು 2012 ರಿಂದೀಚೆಗೆ ಈ ಪ್ರಮಾಣ ಏರುಗತಿಯಲ್ಲಿದೆ ಎಂದು ಪೊಲೀಸ್ ಅಂಕಿ ಅಂಶಗಳು ಸ್ಪಷ್ಟಪಡಿಸಿವೆ.
ರಾಜ್ಯ ಪೊಲೀಸರ ಅಂಕಿ ಅಂಶಗಳ ಪ್ರಕಾರ 2012ರಲ್ಲಿ ರಾಜ್ಯದಾದ್ಯಂತ 9 ಪ್ರಕರಣಗಳು ದಾಖಲಾಗಿದ್ದರೆ 2018ರಲ್ಲಿ ಒಟ್ಟು 75 ಪ್ರಕರಣಗಳು ದಾಖಲಾಗಿವೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ರಾಜ್ಯದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ನಿರಂತರ ಏರಿಕೆಯಾಗುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ.
ಪೊಲೀಸರು ದಾಖಲಿಸಿಕೊಂಡಿರುವಷ್ಟು ಮಾತ್ರವೇ ಪ್ರಕರಣಗಳು ರಾಜ್ಯದಲ್ಲಿ ನಡೆದಿವೆ ಎಂದು ಹೇಳಲು ಸಾಧ್ಯವಿಲ್ಲ. ಬಾಲ್ಯ ವಿವಾಹ ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಜಿಲ್ಲೆ ಮತ್ತು ತಾಲೂಕು ಹಂತದಲ್ಲಿ ಸಮಿತಿಗಳನ್ನು ರಚಿಸಿವೆ. ಆದರೆ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮದುವೆ ನಡೆಯುವ ಮುನ್ನ ಮಾಹಿತಿ ಸಿಕ್ಕಲ್ಲಿ ಮಾತ್ರ ವಿವಾಹ ತಡೆಯುತ್ತಿದ್ದಾರೆ ಮತ್ತು ಕಾನೂನು ಕ್ರಮ ಜರುಗಿಸುತ್ತಿದ್ದಾರೆಯೇ ವಿನಃ ಮದುವೆಯ ನಂತರ ಅಲ್ಲ ಎಂಬುದು ಗಮನಾರ್ಹ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸರಕಾರೇತರ ಸಂಘ ಸಂಸ್ಥೆಗಳು ಅಭಿಯಾನ, ಜಾಗತಿ ಕಾರ್ಯಕ್ರಮಗಳ ಮೂಲಕ ಬಾಲ್ಯ ವಿವಾಹ ನಿಯಂತ್ರಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿವೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ದಕ್ಷಿಣ ಕರ್ನಾಟಕಕ್ಕಿಂತಲೂ ಉತ್ತರ ಕರ್ನಾಟಕದಲ್ಲಿಯೇ ಹೆಚ್ಚಿನ ಬಾಲ್ಯ ವಿವಾಹಗಳು ನಡೆಯುತ್ತಿವೆ. ಇದರಿಂದ, ಸಣ್ಣ ವಯಸ್ಸಿನ ಹೆಣ್ಣುಮಕ್ಕಳ ಬದುಕಿಗೆ ಮಾರಕವಾಗುತ್ತಿವೆ.
ಬ್ರಿಟಿಷರ ಅಧಿಕಾರಾವಧಿಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು 1929ರಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಗಿತ್ತು. ಇದರ ಅನ್ವಯ 18 ವರ್ಷದ ಹುಡುಗ ಹಾಗೂ 14 ವರ್ಷದ ಹುಡುಗಿ ವಿವಾಹಕ್ಕೆ ಅರ್ಹರಾಗಿದ್ದರು. ಆ ಬಳಿಕ ಕಾಯಿದೆಯನ್ನು ಬಲಿಷ್ಠಗೊಳಿಸಲು 2006ರಲ್ಲಿ ತಿದ್ದುಪಡಿ ತಂದ ಭಾರತ ಸರಕಾರ ವಿವಾಹದ ವಯೊಮಿತಿಯನ್ನು ಕ್ರಮವಾಗಿ 21 ಹಾಗೂ 18ಕ್ಕೆ ಏರಿಸಿತು. ಆದರೆ ಕಾಯಿದೆ ಜಾರಿಗೆ ಬಂದ ನಂತರವೂ ಬಾಲ್ಯ ವಿವಾಹಗಳು ನಡೆಯುತ್ತಿರುವುದು ಸರಕಾರಕ್ಕೂ, ನಾಗರೀಕ ಸಮಾಜಕ್ಕೂ ಸವಾಲಾಗಿ ಪರಿಣಮಿಸಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ 11 ವರ್ಷದ ಬಾಲಕಿಯನ್ನು ಮದುವೆಯಾಗಲು ಸಿದ್ದನಾಗಿದ್ದ 35 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆದರೆ ಪ್ರಕರಣದ ಪ್ರಾರಂಭಿಕ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ಆರೋಪಿ ವರನಿಗೆ ಜಾಮೀನು ಮಂಜೂರು ಮಾಡಿ, ನಂತರ ತನಿಖೆ ಮುಂದುವರೆಸಲು ಪೊಲೀಸರಿಗೆ ಸೂಚಿಸಿತ್ತು.
ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು
ಬಾಲ್ಯ ವಿವಾಹ ಕಾಯ್ದೆ 2006 ರ ಪ್ರಕಾರ ಅಪ್ರಾಪ್ತರನ್ನು ಮದುವೆ ಮಾಡಿಕೊಳ್ಳುವ ಮತ್ತು ಮಾಡಿಸುವ ಆರೋಪಿ ವ್ಯಕ್ತಿಗಳಿಗೆ ಗರಿಷ್ಠ 2 ವರ್ಷ ಕಠಿಣ ಶಿಕ್ಷೆ ವಿಧಿಸುವ ನಿಯಮಗಳಿವೆ. ಹಾಗೆಯೇ ಕಾಯ್ದೆಯಡಿ ಆರೋಪಿಗಳನ್ನು ಜಾಮೀನು ರಹಿತ ಬಂಧನಕ್ಕೆ ಒಳಪಡಿಸಲು ಸಾಧ್ಯವಿದೆ. ಆದರೆ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿ ವರ್ಗ ಹಾಗೂ ನ್ಯಾಯಾಲಯಗಳು ಮೃದು ಧೋರಣೆ ತಳೆದು, ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿವೆ.
ಬಾಲ್ಯ ವಿವಾಹದಲ್ಲಿ 3ನೆ ಸ್ಥಾನದಲ್ಲಿದೆ ಕರ್ನಾಟಕ
ದೇಶದಲ್ಲಿ ಅತಿಹೆಚ್ಚು ಬಾಲ್ಯವಿವಾಹ ಜರುಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 3ನೆ ಸ್ಥಾನ ಪಡೆದಿದೆ. ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಮೊದಲೆರಡು ಸ್ಥಾನ ಪಡೆದಿವೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವರದಿ ಪ್ರಕಾರ ಕರ್ನಾಟಕದಲ್ಲಿ ಶೇ.23.2 ರಷ್ಟು ಮಕ್ಕಳು ಬಾಲ್ಯ ವಿವಾಹಕ್ಕೆ ಒಳಗಾಗುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿಯಂತೂ ಇದು ಅವ್ಯಾಹತವಾಗಿದೆ. ಇನ್ನು ಯುನಿಸೆಫ್ ಅಂಕಿಅಂಶದ ಪ್ರಕಾರ, ಬಾಲ್ಯವಿವಾಹ ನಡೆಯುತ್ತಿರುವ ದೇಶಗಳ ಸಾಲಿನಲ್ಲಿ ಭಾರತ ವಿಶ್ವದಲ್ಲಿ 3ನೆ ಸ್ಥಾನ ಪಡೆದಿದೆ. ದೇಶದ ಒಟ್ಟಾರೆ ಬಾಲ್ಯವಿವಾಹ ಪ್ರಕರಣಗಳಲ್ಲಿ ಇಳಿಮುಖವಾಗಿದ್ದರೂ ಕರ್ನಾಟಕದಲ್ಲಿ ಮಾತ್ರ ಏರಿಕೆ ಕಂಡುಬಂದಿದೆ.
ರಾಜ್ಯದ ಬಾಲ್ಯ ವಿವಾಹ ಪ್ರಕರಣಗಳು
ವರ್ಷ--ಪ್ರಕರಣಗಳು
2012--9
2013--29
2014--41
2015--34
2016--48
2017--67
2018--75