ಗಿರೀಶ್ ಕಾರ್ನಾಡ್ ನಿಧನ: ಕಥೆಗಾರ್ತಿ ಬಿ.ಟಿ.ಜಾಹ್ನವಿ ಸಂತಾಪ
ದಾವಣಗೆರೆ, ಜೂ.11: ಸೋಮವಾರ ನಿಧನರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ರಂಗಭೂಮಿ ಕಲಾವಿದ, ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ ಸಾವಿಗೆ ಕಥೆಗಾರ್ತಿ ಬಿ.ಟಿ.ಜಾಹ್ನವಿ ಸಂತಾಪ ಸೂಚಿಸಿದ್ದಾರೆ.
'ನಾನು ಅರ್ಬನ್ ನಕ್ಸಲ್ ಎಂಬ ಫಲಕವನ್ನು ಕೊರಳಿಗೆ ಹಾಕಿಕೊಂಡು, ಮೂಗಿಗೆ ಉಸಿರಾಟದ ಕೊಳವೆ ಸಿಕ್ಕಿಸಿಕೊಂಡು ಗೌರಿ ಕಾರ್ಯಕ್ರಮಕ್ಕೆ ಬಂದಿದ್ದರು ಕಾರ್ನಾಡರು. ಅವರನ್ನು ಕೊನೆಯ ಸಲ ನೋಡಿದ್ದು ಹೀಗೆ. ಎಂತಹದ್ದೇ ಸ್ಥಿತಿಯಲ್ಲೂ ತಮ್ಮ ಪಟ್ಟು ಸಡಿಲಿಸದೆ ಬದ್ಧತೆಯನ್ನು ಮೆರೆದ ಧೀಮಂತ. ಅವರ ಇರುವು ಬಹಳವೇ ಅವಶ್ಯವಿದ್ದ ಕಾಲಕ್ಕೆ ಅವರು ಇಲ್ಲವಾಗಿರುವುದು ದೊಡ್ಡ ನಷ್ಟ. ಯಾವ ಬೆದರಿಕೆಗೂ ಬಗ್ಗದೆ ತಮ್ಮ ನಿಲುವುಗಳ ಪರ ನಿಂತ ಗಟ್ಟಿಗ. ಅಷ್ಟೇ ಸರಳ ಸೌಜನ್ಯ ನಡೆನುಡಿಯಲ್ಲಿ ಸಾಮಾನ್ಯರೊಂದಿಗೂ ಯಾವುದೇ ಹಮ್ಮಬಿಮ್ಮು ತೋರುತ್ತಿರಲಿಲ್ಲ. ತಮ್ಮ ಸಾವಿನಲ್ಲೂ ಅದನ್ನು ಅಷ್ಟೇ ಶಿಸ್ತಿನಿಂದ ಪಾಲಿಸಿದ್ದು, ಎಲ್ಲಾ ಸತ್ಕಾರ ಸಮ್ಮಾನಗಳನ್ನೂ ತಿರಸ್ಕರಿಸಿದ್ದಾರೆ. ಇನ್ನು ನಮಗೆ ಮುನ್ನಡೆಯಲು ನಮ್ಮ ಮುಂದೆ ಅವರು ನಡೆದ ಹಾದಿಯಿದೆ, ಅವರ ಪ್ರಖರ ಚಿಂತನೆಗಳಿವೆ ಎಂದು ಸಂತಾಪ ಸೂಚಕದಲ್ಲಿ ತಿಳಿಸಿದ ಅವರು, ಕಾರ್ನಾಡರ ಸಾವನ್ನು ಸಂಭ್ರಮಿಸುತ್ತಿರುವ ಮನಸ್ಥಿತಿಗಳಿಗೆ ಶೀಘ್ರ ಚಿಕಿತ್ಸೆಯಾಗಿ ಬೇಗ ಗುಣಮುಖವಾಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.