ಪಬ್ಲಿಕ್ ಟಿವಿ ರಂಗನಾಥ್ ಸೇರಿ ಏಳು ಮಂದಿ ವಿರುದ್ಧ ಎಫ್ಐಆರ್
ಬಳ್ಳಾರಿ, ಜೂ.14: ಹಲ್ಲೆ ಆರೋಪ ಸಂಬಂಧ ಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಎಚ್.ಆರ್.ರಂಗನಾಥ್ ಸೇರಿ ಏಳು ಮಂದಿ ವಿರುದ್ಧ ಕೌಲ್ ಬಜಾರ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ನಗರದ ವಿಮ್ಸ್ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ವಿ.ಕೆ.ಯಾದವಾಡ ಅವರ ಮೇಲೆ ಹಲ್ಲೆ ನಡೆದಿದ್ದ ಆರೋಪದಡಿ ಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಎಚ್.ಆರ್.ರಂಗನಾಥ್, ವರದಿಗಾರ ವೀರೇಶ್ದಾನಿ, ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ, ವಿಮ್ಸ್ ವೈದ್ಯರಾದ ಡಾ.ರವಿ ಭೀಮಪ್ಪ, ಡಾ.ಶಡ್ರಕ್, ಶುಶ್ರೂಷಕ ವಿಭಾಗ ಹನುಮಂತರಾಯ ಹಾಗೂ ಉಷಾ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಕೆ.ಯಾದವಾಡ, ಜೂ.12ರಂದು ರಾತ್ರಿ ಲ್ಯಾಬ್ಗೆ ಬಂದ ಉಷಾ ಅವರು ಎದೆನೋವಿನ ಕಾರಣ ಹೇಳಿ, ರಕ್ತ ತಪಾಸಣೆ ಮಾಡುವಂತೆ ಹೇಳಿದರು. ರಕ್ತದ ಮಾದರಿ ಸಂಗ್ರಹಿಸಿದ ಬಳಿಕ ಅವರು ನನ್ನ ಕೈ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಜೊತೆಗೆ, ಅವರೊಂದಿಗೆ ಇದ್ದ ಐವರು ಜನ ಏಕಾಏಕಿ ನನ್ನ ಮೇಲೆ ಹಲ್ಲೆ ನಡೆಸಿ, ನಗದು, ಚಿನ್ನಾಭರಣ, ಮೊಬೈಲ್ ಕಸಿದು ಪರಾರಿಯಾಗಿದ್ದರು ಎಂದು ಆರೋಪಿಸಿದರು.
2015 ರಲ್ಲಿ ಪಬ್ಲಿಕ್ ಟಿವಿಯಲ್ಲಿ ಪ್ರಕಟವಾದ ವರದಿ ಸಂಬಂಧ 2016ರ ಸಾಲಿನಲ್ಲಿ ನಾಲ್ವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೆ. ಅದನ್ನು ರದ್ದು ಮಾಡುವಂತೆ ಅವರು ಕೋರಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ಪೀಠ ರದ್ದು ಮಾಡಿತ್ತು. ನಂತರ, ಅವರೆಲ್ಲಾ ಸಮಜಾಯಿಷಿ ನೀಡುವಂತೆ ನಗರದ ನ್ಯಾಯಾಲಯ ಸೂಚಿಸಿ, ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಇದೇ ಕಾರಣವನ್ನಿಟ್ಟುಕೊಂಡು ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅವರು ದೂರಿದರು.