‘ಪ್ರಬುದ್ಧ ಯೋಜನೆ’ಯಡಿ 13 ಅಭ್ಯರ್ಥಿಗಳಿಗೆ 3.43 ಕೋಟಿ ರೂ.ಧನಸಹಾಯ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು, ಜೂ. 15: ಸಮಾಜ ಕಲ್ಯಾಣ ಇಲಾಖೆ ಜಾರಿಗೆ ತಂದಿರುವ ವಿದೇಶಿ ವಿವಿಗಳಲ್ಲಿ ಉನ್ನತ ವ್ಯಾಸಂಗಕ್ಕೆ ಧನಸಹಾಯ ಮಾಡುವ ‘ಪ್ರಬುದ್ಧ ಯೋಜನೆ’ಯಡಿ ಆಯ್ಕೆಯಾಗಿರುವ 13 ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಶನಿವಾರ ವಿಕಾಸಸೌಧದಲ್ಲಿನ ತನ್ನ ಕಚೇರಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಿದರು. ವಿದೇಶಿ ವಿವಿಗಳಲ್ಲಿ ಉನ್ನತ ವ್ಯಾಸಂಗಕ್ಕೆ ಆಯ್ಕೆಯಾಗಿರುವ 13 ಅಭ್ಯರ್ಥಿಗಳ ಮೊದಲ ಎರಡು ಸೆಮಿಸ್ಟರ್ಗಳಿಗೆ ಇಲಾಖೆ 9.53 ಕೋಟಿ ರೂ.ವೆಚ್ಚವನ್ನು ಭರಿಸುತ್ತಿದೆ ಎಂದರು.
2 ತಿಂಗಳ ಹಿಂದಷ್ಟೆ ಡಿಸಿಎಂ ಡಾ.ಜಿ.ಪರಮೇಶ್ವರ್ ಲೋಕಾರ್ಪಣೆಗೊಳಿಸಿದ್ದ ಈ ಯೋಜನೆಯಡಿ ಮೊದಲ ಹಂತದಲ್ಲಿ 7 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಈಗಾಗಲೆ ಉನ್ನತ ವ್ಯಾಸಂಗಕ್ಕಾಗಿ ವಿದೇಶಗಳಿಗೆ ತೆರಳಿದ್ದಾರೆ. ಎರಡನೆ ತಂಡದಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳು ಹಾಗೂ ಅವರ ಪೋಷಕರನ್ನು ಶುಭ ಹಾರೈಸಿದ ಪ್ರಿಯಾಂಕ್ ಖರ್ಗೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಶೈಕ್ಷಣಿಕ ಪ್ರಗತಿಯೊಂದಿಗೆ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆ ಹೊಂದಬೇಕೆಂದು ಕರೆ ನೀಡಿದರು. ಅಲ್ಲಲ್ಲಿ ಮನೆ ಕೆಲಸ ಮಾಡಿಕೊಂಡು ದುಡಿದು ಮಗನ ವ್ಯಾಸಂಗಕ್ಕೆ ಕಾರಣರಾದ ಬೆಂಗಳೂರಿನ ಚೋಳರಪಾಳ್ಯದ ಕೆ.ಕಮಲಾ ತಮ್ಮ ಪುತ್ರ ಎಂ.ಮೋಹನ್ ‘ಪ್ರಬುದ್ಧ ಯೋಜನೆ’ಯಡಿ ಆಯ್ಕೆಗೊಂಡು ಕೆನಡ ದೇಶಕ್ಕೆ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗಕ್ಕೆ ಹೊರಟಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಅಲ್ಲದೆ, ಸಮಾಜ ಕಲ್ಯಾಣ ಇಲಾಖೆ ಪ್ರಬುದ್ಧ ಯೋಜನೆಯನ್ನು ಜಾರಿಗೆ ತರುವ ಮೂಲಕ ಬಡ ಜನರೂ ಉನ್ನತ ವ್ಯಾಸಂಗ ಮಾಡುವ ಕನಸುಗಳನ್ನು ನನಸು ಮಾಡಿದೆ ಎಂದು ಹೇಳಿದರು. ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಲು ಹೊರಟಿರುವ 13 ಅಭ್ಯರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ‘ಪ್ರಬುದ್ಧ ಯೋಜನೆ’ಯಡಿ ಇದುವರೆಗೂ 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಉನ್ನತ ವ್ಯಾಸಂಗಕ್ಕಾಗಿ ವಿದೇಶದ ವಿವಿಧ ವಿಶ್ವ ವಿದ್ಯಾಲಯಗಳಿಗೆ ಕಳುಹಿಸಲಾಗಿದೆ. ಮೊದಲ ಹಂತದಲ್ಲಿ 13.11ಕೋಟಿ ರೂ.ಗಳನ್ನು ಸಮಾಜ ಕಲ್ಯಾಣ ಇಲಾಖೆ ವೆಚ್ಚ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.