ಓಬಿಸಿ ಪಟ್ಟಗೆ ಬಂಜಾರ ಸಮುದಾಯ ಸೇರ್ಪಡೆ ಪ್ರಸ್ತಾಪಕ್ಕೆ ತೀವ್ರ ವಿರೋಧ
ಬೆಂಗಳೂರು, ಜೂ.16: ರಾಜ್ಯದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಬಂಜಾರ ಸಮುದಾಯವನ್ನು ಓಬಿಸಿ(ಹಿಂದುಳಿದ ವರ್ಗ) ಪಟ್ಟಿಗೆ ಸೇರಿಸುವ ಕೇಂದ್ರ ಸರಕಾರದ ಪ್ರಸ್ತಾಪ ಸರಿಯಿಲ್ಲ ಎಂದು ಬಂಜಾರ ಸಮುದಾಯದ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು.
ರವಿವಾರ ನಗರದಲ್ಲಿ ಬಂಜಾರ ಓಬಿಸಿ ಪಟ್ಟಿಗೆ ಸೇರಿಸುವ ಕೇಂದ್ರ ಸರಕಾರದ ಪ್ರಸ್ತಾಪ ಕುರಿತು ಸಭೆ ನಡೆಸಿದ ಪ್ರಮುಖರು, ಕೇಂದ್ರದ ಪ್ರಸ್ತಾಪವನ್ನು ಎಲ್ಲರೂ ವಿರೋಧಿಸುತ್ತೇವೆ. ಇಂತಹ ತಪ್ಪು ನಿರ್ಧಾರಗಳಿಂದ ಸರಕಾರ ಹಿಂದೆ ಸರಿಯಬೇಕು ಎಂದು ಒತ್ತಾಯ ಮಾಡಿದರು.
ಭೇಟಿ: ಈ ಸುತ್ತೋಲೆ ಬಗ್ಗೆ ಸ್ಪಷ್ಟನೆ ಪಡೆಯಲು ಮತ್ತು ಮನವರಿಕೆ ಮಾಡಿಕೊಡಲು ಮುಖ್ಯಮಂತ್ರಿ, ಸರಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಸೋಮವಾರ(ಜೂ.17) ಭೇಟಿ ಮಾಡಲು ಮುಖಂಡರು ನಿರ್ಧಾರಿಸಿದ್ದಾರೆ.
ಸಭೆಯಲ್ಲಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೀಮಾನಾಯ್ಕಿ, ಶಾಸಕ ಅಶೋಕನಾಯ್ಕಿ, ಮಾಜಿ ಸಚಿವರಾದ ರುದ್ರಪ್ಪಲಮಾಣಿ, ಡಾ.ಬಿ. ಟಿ.ಲಲಿತಾನಾಯ್ಕಿ, ವಕೀಲ, ಹೋರಾಟಗಾರ ಅನಂತನಾಯ್ಕಿ, ರಾಘವೇಂದ್ರ ನಾಯ್ಕಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.