ಆತ್ಮಹತ್ಯೆಗೈದ ರೈತನ ಮನೆಗೆ ಸಿಎಂ ಭೇಟಿ: 5 ಲಕ್ಷ ರೂ. ಪರಿಹಾರಧನ ವಿತರಣೆ
ಮಂಡ್ಯ, ಜೂ.18: ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಕೆ.ಆರ್.ಪೇಟೆ ತಾಲೂಕಿನ ಅಘಲಯ ಗ್ರಾಮದ ರೈತ ಸುರೇಶ್(45) ಮನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ 5 ಲಕ್ಷ ರೂ. ಪರಿಹಾರದ ಚೆಕ್ ನೀಡಿದರು.
ಮೂರು ದಿನಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಸುರೇಶ್, ಆತ್ಮಹತ್ಯೆಗೂ ಮೊದಲು ಸೆಲ್ಫಿ ವಿಡಿಯೋ ಮಾಡಿ ತನ್ನ ಕಷ್ಟವನ್ನು ಸಿಎಂ ಕುಮಾರಸ್ವಾಮಿಗೆ ತಿಳಿಸಿದ್ದರು. ತನ್ನ ಅಂತ್ಯಸಂಸ್ಕಾರಕ್ಕೆ ಆಗಮಿಸುವಂತೆ ಮನವಿ ಮಾಡಿದ್ದರು. ಅಂತ್ಯಸಂಸ್ಕಾರ ನಂತರ ವೀಡಿಯೋ ವೈರಲ್ ಆಗಿತ್ತು.
ಸೋಮವಾರ ರಾತ್ರಿ ವಿಡಿಯೋ ನೋಡಿದ ಕುಮಾರಸ್ವಾಮಿ ಮಧ್ಯರಾತ್ರಿಯೇ ಪ್ರವಾಸ ನಿರ್ಧಾರ ಮಾಡಿದರು. ಮಂಗಳವಾರ ಬೆಳಗ್ಗೆ ಅಘಲಯಕ್ಕೆ ಆಗಮಿಸಿದರು. ಸುರೇಶ್ ಪತ್ನಿ ಜಯಶೀಲ, ಪುತ್ರಿ ಸುವರ್ಣ, ಪುತ್ರ ಚಂದ್ರಶೇಖರ್ ತಮ್ಮ ನೋವನ್ನು ತೋಡಿಕೊಂಡರು.
ಸಾಂತ್ವನ ಹೇಳಿ ಪರಿಹಾರದ ಚೆಕ್ ವಿತರಿಸಿದ ಕುಮಾರಸ್ವಾಮಿ ಅವರು, ಮೃತ ಸುರೇಶ್ ಪುತ್ರನಿಗೆ ಉದ್ಯೋಗ ಒದಗಿಸುವಂತೆ ಸ್ಥಳದಲ್ಲಿ ಹಾಜರಿದ್ದ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರಿಗೆ ಸೂಚಿಸಿದರು. ವಿದ್ಯಾಭ್ಯಾಸ ಮುಗಿಸಿದ ನಂತರ ತನ್ನನ್ನು ಭೇಟಿಯಾಗುವಂತೆ ಪುತ್ರಿ ಸುವರ್ಣಗೆ ಹೇಳಿದರು.
ಕೆರೆಗಳಿಗೆ ನೀರು ತುಂಬಿಸಲಾಗುವುದು: ಸುರೇಶ್ ಕೆ.ಆರ್.ಪೇಟೆ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಸಾಯುವ ಮುನ್ನ ಮನವಿ ಮಾಡಿದ್ದಾರೆ. ಕೆ.ಆರ್.ಪೇಟೆ ಮಾತ್ರವಲ್ಲ ರಾಜ್ಯದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಆಗಬೇಕಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಈಗಾಗಲೇ ಈ ಭಾಗದ ಕೆರೆಗಳನ್ನು ತುಂಬಿಸಲು ಸರಕಾರ ತೀರ್ಮಾನ ಮಾಡಿದೆ. ಅದಕ್ಕಾಗಿ 113 ಕೋಟಿ ರೂ. ನಿಗದಿಪಡಿಸಲಾಗಿದೆ. ತಕ್ಷಣ ಕಾಮಗಾರಿ ಆರಂಭಿಸಿ ಕೆರೆಗಳನ್ನು ತುಂಬಿಸಲಾಗುವುದು. ಸಂತೇಬಾಚಹಳ್ಳಿ ಏತನೀರಾವರಿ ಯೋಜನೆ ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಹೋಬಳಿಯ ಎಲ್ಲಾ ಕೆರೆಗಳಿಗೂ ನೀರು ತುಂಬಿಸಲು ಕ್ರಮ ವಹಿಸಲಾಗುವುದು ಎಂದು ಅವರು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಕೇರಳ ಮಾದರಿ ಕಾನೂನು: ಸಾಲಮನ್ನಾ ರೈತರ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ಖಾಸಗಿ ಬಡ್ಡಿ ವ್ಯವಹಾರ ಕಡಿವಾಣಕ್ಕೆ ಕ್ರಮ ಮುಖ್ಯ. ಇದಕ್ಕೆ ಕಡಿವಾಣ ಹಾಕಲು ಕೇರಳ ಮಾದರಿ ಕಾನೂನು ಜಾರಿಗೆ ಚಿಂತನೆ ನಡೆಸಲಾಗಿದೆ. ಈಗಾಗಲೇ ಸಂಪೂರ್ಣ ಮಾಹಿತಿ ಪಡೆಯಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಸಮಸ್ಯೆ ಪರಿಹಾರಕ್ಕೆ ರೈತರ ಆತ್ಮಹತ್ಯೆ ಹಾದಿ ಹಿಡಿಯಬಾರದು. ಇದರಿಂದ ಸಮಸ್ಯೆ ಬಗೆಹರಿಯಲ್ಲ. ಬದಲಾಗಿ ಕುಟುಂಬದವರ ಸಮಸ್ಯೆ ಹೆಚ್ಚಾಗುತ್ತದೆ. ಏನೇ ಕಷ್ಟ ಬಂದರು ಧೈರ್ಯದಿಂದ ಬದುಕುವ ಛಲ ಬೆಳೆಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಧೈರ್ಯ ತುಂಬಲು ಗ್ರಾಮ ವಾಸ್ತವ್ಯ: ಹಳ್ಳಿಯ ಜನರಿಗೆ ಧೈರ್ಯ ತುಂಬಲು ಗ್ರಾಮ ವಾಸ್ತವ್ಯ ಮಾಡಲು ಮುಂದಾಗಿದ್ದೇನೆ. ಗಿಮಿಕ್ಗಾಗಿ ಗ್ರಾಮ ವಾಸ್ತವ್ಯ ಮಾಡುತ್ತಿಲ್ಲ. ಎಲ್ಲಾ ಜಿಲ್ಲಾಧಿಕಾರಿಗಳಿಂದ ಗ್ರಾಮಗಳ ಮಾಹಿತಿ ಪಡೆದಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಟೀಕೆಗೆ ಕುಮಾರಸ್ವಾಮಿ ಟಾಂಗ್ ನೀಡಿದರು.
ಬಿಜೆಪಿ ನಾಯಕರು ಗ್ರಾಮ ವಾಸ್ತವ್ಯ ಬೇಡ, ಬರಪರಿಹಾರ ಅಧ್ಯಯನ ಮಾಡಿ ಎನ್ನುತ್ತಿದ್ದಾರೆ. ನಾನು ಸ್ಟಾರ್ ಹೋಟೆಲ್ಗಳನ್ನು ನೋಡಿದ್ದೇನೆ, ಸಣ್ಣ ಹಳ್ಳಿಯಲ್ಲೂ ವಾಸ್ತವ್ಯ ಮಾಡಿದ್ದೇನೆ ಎಂದು ತಮ್ಮ ಗ್ರಾಮ ವಾಸ್ತವ್ಯದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಸ್ಥಳೀಯ ಶಾಸಕ ಕೆ.ಸಿ.ನಾರಾಯಣಗೌಡ, ಜಿಲ್ಲಾ ಪಂಚಾಯತ್ ಸದಸ್ಯ ಬಿ.ಎಲ್.ದೇವರಾಜು ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.