ಹಿಂದೂ ಧರ್ಮ ತ್ಯಜಿಸಿ ಬೌದ್ಧ ದಮ್ಮ ಸ್ವೀಕರಿಸಿದ ನೂರಾರು ದಲಿತರು
ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಖಂಡನೆ
ಚಾಮರಾಜನಗರ, ಜೂ.18: ಚಾಮರಾಜನಗರ ಜಿಲ್ಲೆಯಲ್ಲಿ ಜೂನ್ 3 ರಂದು ನಡೆದ ದಲಿತ ಯುವಕನ ಬೆತ್ತಲೆ ಮೆರವಣಿಗೆ ಹಾಗೂ ಹಲ್ಲೆ ಪ್ರಕರಣವನ್ನು ಖಂಡಿಸಿರುವ ದಲಿತ ಸಂಘಟನೆಗಳಿಂದ ಗುಂಡ್ಲುಪೇಟೆಯಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ಮತ್ತು ಸಾಮೂಹಿಕ ಬೌದ್ಧ ದಮ್ಮ ಸ್ವೀಕಾರ ಕಾರ್ಯಕ್ರಮ ನಡೆಯಿತು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಹೊರವಲಯದಲ್ಲಿ ನಡೆದ ದಲಿತ ಯುವಕನ ಬೆತ್ತಲೆ ಮೆರವಣಿಗೆ, ಹಲ್ಲೆ ಪ್ರಕರಣವನ್ನು ಖಂಡಿಸಿ ಮಂಗಳವಾರ ಕೆಬ್ಬೆಕಟ್ಟೆ ಶನೇಶ್ವರ ದೇವಾಲಯದಿಂದ ಗುಂಡ್ಲುಪೇಟೆಗೆ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಜಾಥಾ ನಡೆಸಿ, ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಇರುವ ಬಯಲು ರಂಗಮಂದಿರದಲ್ಲಿ ನೂರಾರು ಮಂದಿ ಹಿಂದೂ ಧರ್ಮವನ್ನು ತೊರೆದು ಸಾಮೂಹಿಕವಾಗಿ ಬೌದ್ಧ ದಮ್ಮ ಸ್ವೀಕರಿಸಿದರು. ಈ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿದರು.
'ದಲಿತ ಯುವಕನ ಬೆತ್ತಲೆ ಘಟನೆಯಿಂದ ದಲಿತ ಯುವಕನ ಕುಟುಂಬದವರಿಗೆ ಮಾನಸಿಕವಾಗಿ ಘಾಸಿಯಾಗಿದ್ದು, ಕುಟುಂಬಕ್ಕೆ ಸರ್ಕಾರವು 25 ಲಕ್ಷ ರೂ. ಪರಿಹಾರವಾಗಿ ನೀಡಬೇಕು ಹಾಗೂ ಘಟನೆಯಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ಜೊತೆಗೆ ಅವರನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕು ಎಂದು ಅವರು ಆಗ್ರಹಿಸಿದರು.
ಈ ವೇಳೆ ದಲಿತ ಸಂಘಟನೆಗಳ ಮುಖಂಡರು, ಬೌದ್ದ ದಮ್ಮ ಬಿಕ್ಕುಗಳು ಹಾಜರಿದ್ದು, ಮತಾಂತರ ಸಮಾರಂಭಕ್ಕೆ ಸಾಕ್ಷಿಯಾದರು.