ನಿಖಿಲ್-ಪ್ರಜ್ವಲ್ ತೆರೆಮರೆಯಲ್ಲಿರಲಿ: ಜೆಡಿಎಸ್ ನಾಯಕ ವೈಎಸ್ವಿ ದತ್ತ
ಬೆಂಗಳೂರು, ಜೂ.18: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಗ ನಿಖಿಲ್ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಈಗಾಗಲೇ ಸಾಕಷ್ಟು ಪ್ರಜ್ವಲಿಸಿದ್ದಾರೆ. ಹೀಗಾಗಿ, ಸ್ವಲ್ಪ ದಿನ ತೆರೆ ಮರೆಯಲ್ಲಿ ಇರುವುದು ಉತ್ತಮ ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈಎಸ್ವಿ ದತ್ತ ತಿಳಿಸಿದರು.
ಮಂಗಳವಾರ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನದಿಂದ ನಿಖಿಲ್ ಹಾಗೂ ಪ್ರಜ್ವಲ್ ದೂರವಿರುವುದು ಉತ್ತಮ. ಪಕ್ಷದ ಮುಖ್ಯವಾಹಿನಿಯ ರಾಜಕಾರಣಕ್ಕೆ ಅವರು ಈಗಲೇ ಬರುವುದು ಬೇಡ ಎಂದು ಸಲಹೆ ನೀಡಿದರು.
ನಿಖಿಲ್ ಹಾಗೂ ಪ್ರಜ್ವಲ್ ಈಗಾಗಲೇ ಸಾಕಷ್ಟು ಹೆಸರು ಮಾಡಿದ್ದಾರೆ. ಇದರಿಂದ, ಇಬ್ಬರೂ ಪ್ರಜ್ವಲಿಸುತ್ತಿದ್ದಾರೆ. ಹೀಗಾಗಿ ಪಕ್ಷ ಸಂಘಟನೆಗಾಗಿ ಬೇರೆಯವರಿಗೆ ಅವಕಾಶ ಮಾಡಿಕೊಡುವುದು ಉತ್ತಮ ಎಂದು ದತ್ತ ಹೇಳಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಎಚ್.ವಿಶ್ವನಾಥ್ ಮುಂದುವರೆಯುವುದು ಸೂಕ್ತ. ಈಗಾಗಲೇ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನಾನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ವಿಶ್ವನಾಥ್ ಮಾರ್ಗದರ್ಶನದಲ್ಲಿ ನಾವು ಮುಂದುವರೆಯುತ್ತೇವೆ ಎಂದು ಅವರು ತಿಳಿಸಿದರು.