ದಯಾಮರಣ ಕೋರಿದ ಕುಟುಂಬಕ್ಕೆ ಉಪವಿಭಾಗಾಧಿಕಾರಿ ಅಭಯ: ಅಗತ್ಯ ಕ್ರಮ ಕೈಗೊಳ್ಳುವ ಭರವಸೆ
ಮಡಿಕೇರಿ, ಜೂ.20 : ಮಳೆಹಾನಿ ಪರಿಹಾರ ದೊರೆತಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿ ದಯಾಮರಣ ಕೋರಿದ್ದ ಕುಟುಂಬಕ್ಕೆ ಉಪವಿಭಾಗಾಧಿಕಾರಿ ಟಿ.ಜವರೇಗೌಡ ಅಗತ್ಯ ಕ್ರಮದ ಭರವಸೆ ನೀಡಿದ್ದಾರೆ.
ಮಡಿಕೇರಿ ಹೋಬಳಿಯ ನಿಡುವಟ್ಟು ಗ್ರಾಮದ ಕಾರೇರ ಕೆ.ಜೋಯಪ್ಪ ಮತ್ತು ಅವರ ಸಹೋದರ ಕಾರೇರ ಕೆ.ದುರ್ಯೋಧನ ಅವರು ಪ್ರಕೃತಿ ವಿಕೋಪದ ಪರಿಹಾರ ಸಿಗದಿದ್ದರೆ ದಯಾಮರಣ ನೀಡುವಂತೆ ಮನವಿ ಮಾಡಿರುವ ಬಗ್ಗೆ ಪತ್ರಿಕೆ ವರದಿ ಮಾಡಿತ್ತು. ಈ ಸಂಬಂಧ ಪುನರ್ ವಸತಿ ವಿಭಾಗದ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರು ಬುಧವಾರ ನಿಡುವಟ್ಟು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿದರು.
ಪ್ರಕೃತಿ ವಿಕೋಪದ ಪರಿಹಾರ ಸಂಬಂಧ ತಮ್ಮ ಮನವಿಯನ್ನು ನಿಯಮಾನುಸಾರ ಪರಿಶೀಲಿಸಿ ತುರ್ತಾಗಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ಅಭಯ ನೀಡಿದರು.
ಇನ್ನು ಮುಂದೆ ಆತ್ಮವಿಶ್ವಾಸದಿಂದ ಬದುಕು ನಡೆಸಲಾಗುವುದು, ಯಾವುದೇ ಕಾರಣಕ್ಕೂ ವಿಚಲಿತರಾಗುವುದಿಲ್ಲ, ದಯಾಮರಣದಂತಹ ನಿರಾಶಾದಾಯಕ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ ಎಂದು ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರು ಹೇಳಿದ್ದಾರೆ.