ನ್ಯಾಯ ಕೊಡಿಸುವಂತೆ ಒತ್ತಾಯ: ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
ಸಾಗರ: ಇಲ್ಲಿನ ಎಂ.ಜಿ.ಎನ್ ಪೈ ಫ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಚಾಕುವಿನಿಂದ ಕತ್ತು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ನಡೆದಿದೆ.
ಗಾಂಧಿನಗರ ನಿವಾಸಿ ವಾರಿಜಾ (53), ಖಾಸಗಿ ವ್ಯಕ್ತಿಗಳ ಜೊತೆ ಸಾಲ ಮಾಡಿಕೊಂಡಿದ್ದು, ಸಾಲದ ಬಡ್ಡಿ ವಿಪರೀತವಾಗುತ್ತಿದ್ದಂತೆ ಸಾಲ ನೀಡಿದ ವ್ಯಕ್ತಿಗಳು ಸಾಲ ಮರುಪಾವತಿಗಾಗಿ ಕಿರುಕುಳ ನೀಡುತ್ತಿದ್ದರು. ಈ ವಿಚಾರವಾಗಿ ವಾರಿಜಾ ಪೊಲೀಸರ ಮೊರೆ ಹೋಗಿದ್ದು, ರಾಜಿ ಸಂಧಾನದ ಮೂಲಕ ಬಗೆ ಹರಿದಿದೆ. ಆದರೆ ಇತ್ತೀಚೆಗೆ ಕೆಲ ವ್ಯಕ್ತಿಗಳು ಬಡ್ಡಿ ಹಣ ನೀಡುವಂತೆ ವಾರಿಜಾ ಅವರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ತಿಳಿದುಬಂದಿದ್ದು, ಈ ವಿಚಾರವಾಗಿ ನ್ಯಾಯಾಧೀಶರಾದ ಸಯ್ಯದ್ ಅರಫಾತ್ ಇಬ್ರಾಹಿಂ ಅವರಿಗೆ ನ್ಯಾಯ ಕೊಡಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಕಿರುಕುಳ ನೀಡಿದ ಎಲ್ಲರ ವಿವರ ಬರೆದಿಟ್ಟಿದ್ದಾರೆ. ಗಾಯಾಳು ವಾರಿಜಾ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅನ್ನ ನಾಳಕ್ಕೆ ಸಮೀಪದಲ್ಲಿ ಕತ್ತು ಕೊಯ್ದುಕೊಂಡಿದ್ದಾರೆ.
ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.